ಬೈಲೂರು: ಬೈಕ್‌ಗಳ ನಡುವೆ ಅಪಘಾತ ಮಹಿಳೆಗೆ ಗಂಭೀರ ಗಾಯ

ಕಾರ್ಕಳ: ತಾಲೂಕಿನ ಬೈಲೂರು ಗ್ರಾಮದ ಕಲ್ಲಕಂಬ ಬಳಿ ಸೋಮವಾರ (ಆ. 31) ಬೆಳಿಗ್ಗೆ ಸಂಭವಿಸಿದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ನಿವಾಸಿ ಶಿವಪ್ರಸಾದ್ ನಾಯ್ಕ ಅವರು ತಮ್ಮ ಪತ್ನಿ ಮೋಹಿನಿ ಅವರೊಂದಿಗೆ ಬೈಕ್‌ನಲ್ಲಿ ಕಾರ್ಕಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಕಲ್ಲಕಂಬ ಬಳಿ ಮುಂಭಾಗದಲ್ಲಿ ತೆರಳುತ್ತಿದ್ದ ಮತ್ತೊಂದು ಬೈಕ್‌ನ ಸವಾರ ಮನ್ಸೂರ್ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಎರಡೂ ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿವೆ.
ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಮೋಹಿನಿ ಅವರ ತಲೆ ಹಾಗೂ ಹಣೆಗೆ ತೀವ್ರ ರಕ್ತಗಾಯವಾಗಿದ್ದು, ಶಿವಪ್ರಸಾದ್ ಇನ್ನೊಂದು ಬೈಕ್ ನಲ್ಲಿದ್ದ ಮನ್ಸೂರ್ ಹಾಗೂ ಸಹಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಮೋಹಿನಿ ಅವರನ್ನು ಕಾರ್ಕಳದ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































error: Content is protected !!
Scroll to Top