ಹೆಬ್ರಿ : 2005ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರಕಾರವು ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಅವರ ಯೋಜನೆಯಂತೆ ಭಾರತ ರಾಷ್ಟ್ರದಲ್ಲಿ ಉದ್ಯೋಗ ಖಾತ್ರಿಯನ್ನು ಜಾರಿಗೆ ತಂದು ನಿರುದ್ಯೋಗಿಗಳು ಹಾಗೂ ಕೂಲಿ ಕಾರ್ಮಿಕರ ಸುಸ್ಥಿರ ಜೀವನಕ್ಕೆ ನೆರವಾಗಿತ್ತು. ಆದರೆ, ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಹಲವು ನಿಯಂತ್ರಣ ತಂದು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನರೇಗ ಉದ್ಯೋಗ ಖಾತ್ರಿ ಯೋಜನೆ ಕಳೆದ 20 ವರ್ಷದಿಂದ ಜಾರಿಯಲ್ಲಿದ್ದು, ವಿಶ್ವಾದ್ಯಾಂತ ಪ್ರಶಂಸೆಯನ್ನೂ ಪಡೆದಿದೆ. ಯೋಜನೆಯಿಂದ ದೇಶಾದ್ಯಾಂತ ಪ್ರತಿ ಗ್ರಾಮ ಪಂಚಾಯತಿಗೆ 1 ಕೋಟಿ ಹಣ ಖರ್ಚು ಮಾಡುವ ಅವಕಾಶ ಇತ್ತು. ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಗೆ ವಾರ್ಷಿಕವಾಗಿ ಯೋಜನೆಯಲ್ಲಿ 6 ಸಾವಿರ ಕೋಟಿ ರೂ. ವಿನಿಯೋಗವಾಗುತ್ತಿತ್ತು. ಇದರಿಂದ ದೇಶಾದ್ಯಾಂತ ಬಡವರ ತಲಾ ವರಮಾನ ಹೆಚ್ಚಲು ಪ್ರಮುಖ ಕಾರಣವಾಗಿತ್ತು. ಆದರೆ, ಈಗ ಬಿಜೆಪಿ ಸರಕಾರವು ಹಲವು ನಿಯಂತ್ರಣವನ್ನು ಹೇರುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯ ಹೆಸರು ಬದಲಿಸಿ 2025ರ ವಿ.ಜಿ. ರಾಮ್ ಜಿ. – ವಿಕಸಿತ ಭಾರತ ಉದ್ಯೋಗ ಖಾತರಿ ಅಭಿಯಾನ ಎಂದು ಮಾಡಿ 100 ದಿನದ ಕೂಲಿಯನ್ನು 125 ದಿನಕ್ಕೆ ಹೆಚ್ಚಿಸಿದ್ದಾರೆ. ಆದರೆ ಈ ಮೊತ್ತದಲ್ಲಿ ಶೇಕಡಾ 40% ರಾಜ್ಯ ಸರ್ಕಾರ ಪಾಲು ನೀಡಬೇಕಾಗಿದ್ದು, ಪಾಲು ನೀಡಿದಲ್ಲಿ ಮಾತ್ರ ಉಳಿದ 60% ಶೇಕಡಾ ಮಂಜೂರಾತಿ ಕೇಂದ್ರ ಸರ್ಕಾರ ನೀಡುವುದಾಗಿ ಹೇಳಿರುವುದು ಅನ್ಯಾಯ. ಅದು ಅಲ್ಲದೆ ರಾಜ್ಯ ಸರ್ಕಾರ 40% ಶೇಕಡ ನೀಡಿದರೂ ಕೇಂದ್ರ ಸರ್ಕಾರದ ರಾಷ್ಟ್ರ ಮಟ್ಟದ ಮಾರ್ಗದರ್ಶನ ಸಮಿತಿ ಮಂಜೂರು ಮಾಡಿದರೆ ಮಾತ್ರ ರಾಜ್ಯಕ್ಕೆ ಯೋಜನೆಯ ಹಣ ಲಭಿಸಲಿದೆ. ಇದರಿಂದ ಗಾಂಧೀಜಿ ಕಲ್ಪನೆಯ ಗ್ರಾಮ ಸ್ವರಾಜ್ ವ್ಯವಸ್ಥೆಗೆ ರಾಮರಾಜ್ಯ ಆಧಾರಿತ, ಪಂಚಾಯತ್ ರಾಜ್ ಆಡಳಿತಕ್ಕೆ ದಕ್ಕೆಯುಂಟಾಗಿ ಮತ್ತೇ ಕೇಂದ್ರೀಕರಣ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಆದರೆ ಮನಮೋಹನ್ ಸಿಂಗ್ ಸರ್ಕಾರ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯವಸ್ಥೆಗೆ ಸಂಪೂರ್ಣ ಅನುಷ್ಠಾನ ಜವಾಬ್ದಾರಿ ನೀಡಿ ಉದ್ಯೋಗ ಖಾತ್ರಿ ಯೋಜನೆಯನ್ನು ದೇಶಾದ್ಯಾಂತ ಜಾರಿಗೊಳಿಸಿ ಸಫಲಗೊಳಿಸಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಈ ಹಿಂದಿನ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂದು ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

























































































