ಒಡಿಶಾ : ಪುರಿ ಜಗನ್ನಾಥ ದೇಗುಲದ ರಥಯಾತ್ರೆಯ ಸಂದರ್ಭ ಕಿಕ್ಕಿರಿದ ಜನದಟ್ಟಣೆಯಿಂದಾಗಿ 600ಕ್ಕೂ ಅಧಿಕ ಮಂದಿ ಕುಸಿದು ಬಿದ್ದು ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಪುರಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಕಿಶೋರ್ ಸತ್ಪತಿ, ಜನದಟ್ಟಣೆ, ಸೆಕೆಯಿಂದಾಗಿ ಭಕ್ತರು ಕುಸಿದು ಬಿದ್ದಿದ್ದಾರೆ. ಹಲವರು ಗಾಯಗೊಂಡಿದ್ದಾರೆ, ವಾಂತಿ ಮತ್ತು ಮೂರ್ಛೆ ಹೋಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಬಾಲಗಂಡಿ ಪ್ರದೇಶದ ಬಳಿ ಹಲವಾರು ಜನರು ಗಾಯಗೊಂಡಿದ್ದಾರೆ, ಅಲ್ಲಿ ಭಗವಾನ್ ಬಲಭದ್ರನ ರಥವಾದ ತಾಳಧ್ವಜವು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು ಎಂದು ತಿಳಿದುಬಂದಿದೆ. ದೀರ್ಘಕಾಲದ ನಿಲುಗಡೆಯಿಂದಾಗಿ ಜನಸಂದಣಿ ದಟ್ಟವಾಯಿತು. ಇದರ ಪರಿಣಾಮವಾಗಿ ಜನದಟ್ಟಣೆಯ ಪ್ರದೇಶದಿಂದ ಹೊರಬರಲು ಪ್ರಯತ್ನಿಸುವಾಗ ಹಲವಾರು ಜನರು ಸಿಲುಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುರಿ ಜಗನ್ನಾಥ ರಥಯಾತ್ರೆ ಜನದಟ್ಟಣೆ : 9 ಮಂದಿಗೆ ಗಾಯ – 600 ಮಂದಿ ಅಸ್ವಸ್ಥ































