ಉಡುಪಿಯ ರಾಮಕಥಾ ಸಮಿತಿ ವತಿಯಿಂದ ರಾಮಕಥಾ ಕಾರ್ಯಕ್ರಮ

ರಾಮನ ಆದರ್ಶವು ಸಾಮರಸ್ಯ ಏಕತೆಯನ್ನು ಬಲಪಡಿಸುವುದು – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಉಡುಪಿ : ರಾಮಾಯಣವು ಸತ್ಯ, ಘನತೆ, ಕರ್ತವ್ಯ, ತ್ಯಾಗ, ಪ್ರೀತಿ ಮತ್ತು ಸೇವೆಯ ಸಂದೇಶ ಸಾರುವುದು. ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ನಮ್ಮ ತತ್ವ, ಕರ್ತವ್ಯಗಳಿಂದ ವಿಮುಖರಾಗಬಾರದು ಎಂಬುದನ್ನು ಭಗವಾನ್ ಶ್ರೀರಾಮನ ಜೀವನ ಕಲಿಸುತ್ತದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟರು.
ಅವರು ಸೆ. 8ರಂದು ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಆಯೋಜಿಸಿದ್ದ ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬದಲ್ಲಿ ಮೌಲ್ಯಗಳನ್ನು, ಸಮಾಜದಲ್ಲಿ ಸಾಮರಸ್ಯವನ್ನು ಹಾಗೂ ಜೀವನದಲ್ಲಿ ಶಿಸ್ತನ್ನು ಬೆಳೆಸಲು ರಾಮಾಯಣವು ಪ್ರೇರಣೆ ನೀಡುವುದು. ತಾಯಿ ಶಬರಿ, ಸುಗ್ರೀವ ಮತ್ತು ಹನುಮಂತರನ್ನು ಶ್ರೀರಾಮ ಗೌರವಿಸಿದ ರೀತಿ ಸಾಮಾಜಿಕ ಏಕತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯ ಆದರ್ಶವನ್ನು ಸಾರುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.
ರಾಮಾಯಣವು ಅಹಂಕಾರದ ಬದಲು ನಮ್ರತೆ, ಸ್ವಾರ್ಥದ ಬದಲು ಸೇವೆ ಹಾಗೂ ದ್ವೇಷದ ಬದಲು ಪ್ರೀತಿಯನ್ನು ಅಳವಡಿಸಿಕೊಳ್ಳುವಂತೆ ನಮಗೆ ಪ್ರೇರೇಪಿಸುತ್ತದೆ. ಈ ಶಾಶ್ವತ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಇಂದಿನ ಸಂದರ್ಭದಲ್ಲಿ ಶ್ರೀರಾಮನ ಸತ್ಯ, ತ್ಯಾಗ, ಕರುಣೆ, ಸೇವೆ ಮತ್ತು ಸಾಮರಸ್ಯದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸಾಮರಸ್ಯ ಮತ್ತು ರಾಷ್ಟ್ರದಲ್ಲಿ ಏಕತೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ರಾಜ್ಯಪಾಲರು ಹೇಳಿದರು.

ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರು ರಾಮಕಥೆಯ ಪ್ರಸಿದ್ಧ ನಿರೂಪಕರು, ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರೀತಿ, ಕರುಣೆ ಮತ್ತು ಸಾಮರಸ್ಯದ ಸಂದೇಶವನ್ನು ಸಮಾಜದಲ್ಲಿ ಹರಡುತ್ತಿರುವ ಸಂತರು. ತಮ್ಮ ಸರಳ ಹಾಗೂ ಹೃದಯಸ್ಪರ್ಶಿ ನಿರೂಪಣೆಯ ಮೂಲಕ ಶ್ರೀರಾಮನ ಆದರ್ಶಗಳನ್ನು ಲಕ್ಷಾಂತರ ಜನರ ಹೃದಯಗಳಿಗೆ ತಲುಪಿಸುತ್ತಿದ್ದಾರೆ. ಅವರ ರಾಮಕಥೆಗಳು ಮಾನವೀಯತೆ, ನೈತಿಕತೆ, ಸೇವೆ ಹಾಗೂ ಜೀವನ ಮೌಲ್ಯಗಳ ಕುರಿತು ಅರಿವು ಮೂಡಿಸುತ್ತಿವೆ ಎಂದು ತಿಳಿಸಿದರು.

ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದ್ದು, ಸಂತ ಮಧ್ವಾಚಾರ್ಯರ ಮಹಾನ್ ಪರಂಪರೆ ಹಾಗೂ ಶ್ರೀಕೃಷ್ಣನ ಭಕ್ತಿಗೆ ಹೆಸರುವಾಸಿಯಾಗಿದೆ. ಇದೇ ಪವಿತ್ರ ನೆಲದಲ್ಲಿ ಇಂದು ಶ್ರೀರಾಮನ ಕಥೆಯ ಅಮೃತವೂ ಹರಿಯುತ್ತಿರುವುದು ಭಾರತದ ವೈವಿಧ್ಯಮಯ ಹಾಗೂ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಭಾರತೀಯ ಧರ್ಮ, ಸಂಸ್ಕೃತಿ, ಆಧ್ಯಾತ್ಮಿಕತೆ ಹಾಗೂ ಜೀವನ ಮೌಲ್ಯಗಳ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುವ ಅಗತ್ಯವಿದೆ. ನಮ್ಮ ಸನಾತನ ಪರಂಪರೆಯು “ವಸುಧೈವ ಕುಟುಂಬಕಂ” ಮತ್ತು “ಸರ್ವೇ ಭವಂತು ಸುಖಿನಃ” ಎಂಬ ಸಾರ್ವತ್ರಿಕ ಸಂದೇಶವನ್ನು ಸಾರಿದೆ. ಪೂಜ್ಯ ಸಂತರು ಮತ್ತು ಮಹಾತ್ಮರು ಈ ಮಹಾನ್ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿರುವುದು ಶ್ಲಾಘನೀಯವೆಂದರು. ಕಾರ್ಯಕ್ರಮದಲ್ಲಿ ಪ್ರವೀಣ್ ಕಾಂಜಿ ತನ್ನಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.























































error: Content is protected !!
Scroll to Top