ಕಾರ್ಕಳ : ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಶ್ರೀ ಮನ್ಮಹಾರಥೋತ್ಸವ ಮಾ. 14 ರಿಂದ ಆರಂಭಗೊಂಡು ಮಾ. 17ರಂದು ಸಂಪನ್ನಗೊಳ್ಳಲಿದೆ. ಮಾ. 14ರಂದು ಧಾರ್ಮಿಕ ವಿಧಿ ವಿಧಾನಗಳು ಜರುಗಿ, ಸಂಜೆ ಭಜನೆ, ರಾತ್ರಿಪೂಜೆ, ಬಲಿ, ರಂಗ ಪೂಜೆ ಮತ್ತು ಭೂತಬಲಿ ಸೇವೆಯು ನಡೆಯಲಿರುವುದು. ಮಾ. 15ರಂದು ಮಧ್ಯಾಹ್ನ ಮಹಾಪೂಜೆ, ಹೂವಿನ ಪೂಜೆ ಮತ್ತು ಅನ್ನಸಂತರ್ಪಣೆ ಜರುಗಲಿದ್ದು, ಪರಪ್ಪಾಡಿ ಶ್ರೀ ಕೇಶವ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮವು ಸಂಜೆ 6ಕ್ಕೆ ನಡೆಯಲಿದ್ದು, ರಾತ್ರಿ ಮಂಗಳೂರು ಸಾಯಿಶಕ್ತಿ ಕಲಾ ಬಳಗದವರಿಂದ ಬೊಳ್ಳಿ ಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ ನಡೆಯಲಿರುವುದು. ಮಾ. 16ರಂದು ಕಾಬೆಟ್ಟು ಓಂಕಾರ ಭಜನಾ ಮಂಡಳಿಯಿಂದ ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಪೂಜೆ ಜರುಗಲಿರುವುದು. ಮಾ. 17ರಂದು ಮುಂಜಾನೆ 8ಕ್ಕೆ ಗಣಹೋಮ, ತುಲಾಭಾರ ಸೇವೆ, 10ಕ್ಕೆ ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಪೂರ್ವಾಹ್ನ 11.30ಕ್ಕೆ ರಥೋತ್ಸವವು ನಡೆಯಲಿರುವುದು. ಸಂಜೆ 6ಕ್ಕೆ ಕಲಂಬಾಡಿ ಪದವು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಮುಂಡಿಲತ್ತಾಯಿ ದೈವದ ನೇಮೋತ್ಸವ ನಡೆಯಲಿರುವುದು.
ಮಾ. 14-17 : ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ







































