ಬಹುಮುಖಿ ಸ್ತ್ರೀ – ನೂರು ಮುಖಗಳು, ನೂರಾರು ಆಯಾಮಗಳು

ಮಾರ್ಚ್ 8ರ ವಿಶ್ವಮಹಿಳಾ ದಿನ ನೇಪಥ್ಯಕ್ಕೆ ಸರಿದು ಹೋಯಿತು. ಅದು ಆಕೆಯ ದಿನ ಆಗಿತ್ತು. ಆಕೆಗೋಸ್ಕರ ಮುಡಿಪಾದ ದಿನ. ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ ಅದು. ಅದಿಲ್ಲದೆ ಆಚರಣೆ ಪೂರ್ತಿ ಆಗೋದಿಲ್ಲ.
ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ನಾದಿನಿಯಾಗಿ, ಓರಗಿತ್ತಿಯಾಗಿ, ಆಪ್ತತೆಯ ಗೆಳತಿಯಾಗಿ, ಹೆಂಡತಿಯಾಗಿ, ಪ್ರೇರಣೆ ನೀಡುವ ಪ್ರೇಯಸಿ ಆಗಿ, ಶಿಕ್ಷಕಿಯಾಗಿ… ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣರಾದ, ತನ್ನ ಬದುಕಿನ ಇಂಚಿಂಚು ಹ್ಯಾಪಿನೆಸನ್ನು ತುಂಬಾ ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯಿ ಮಹಿಳೆಗೂ ಅವಳದ್ದೇ ಮಹಿಳಾ ದಿನದ ಶುಭಾಶಯಗಳನ್ನು ಸಲ್ಲಿಸಲು ಬಾಕಿ ಇದ್ದವರು ಇಂದಾದರೂ ಸಲ್ಲಿಸಿ.
ಮಹಿಳಾ ದಿನದ ನೆಪದಲ್ಲಿ ಹೀಗೊಂದು ಅರ್ಥಪೂರ್ಣ ಮಹಿಳಾ ಸಾಧಕರನ್ನು ಪಟ್ಟಿ ಮಾಡುತ್ತ ಹೋಗೋಣ ಹಾಗೂ ಅವರನ್ನು ಅಭಿನಂದನೆ ಕೂಡ ಮಾಡೋಣ.

1) ನೂರಾರು ಆಲದ ಮರ ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ

2) ಸಾವಿರಾರು ಜಾನಪದ ಹಾಡುಗಳನ್ನು ನೆನಪಿಟ್ಟು ಅವುಗಳನ್ನು ಹಾಡುತ್ತ ಜನಜಾಗೃತಿ ಮೂಡಿಸುತ್ತಿರುವ ಸುಕ್ರಜ್ಜಿಗೆ

3) ಚಾರ್ಲಿ ಚಾಪ್ಲಿನ್ ಎಂಬ ಅದ್ಭುತ ಪ್ರತಿಭೆಗೆ ಜನ್ಮ ಕೊಟ್ಟ ಮತ್ತು ಅವನ ಪ್ರತಿಭೆಗೆ ಕೊನೆಯ ಉಸಿರಿನತನಕ ಪ್ರೇರಣೆಯಾಗಿ ನಿಂತ, ತನಗೆ ಮರೆವಿನ ಕಾಯಿಲೆ ಇದ್ದರೂ ಮಗನಿಗಾಗಿ ಜೀವ ಹಿಡಿದುಕೊಂಡ ಅವನ ತಾಯಿ ಹಾನ್ನಾ ಚಾಪ್ಲಿನ್ ಅವರಿಗೆ

4) ಎಡಿಸನ್ ಎಂಬ ಸಮಸ್ಯಾತ್ಮಕ ಮಗುವಿಗೆ ಜನ್ಮಕೊಟ್ಟು ನೂರಾರು ಸವಾಲುಗಳ ನಡುವೆ ಕೂಡ ಆತನ ಅಷ್ಟೂ ಸಂಶೋಧನಾ ಪ್ರವೃತ್ತಿಗಳಿಗೆ ಬೆಂಬಲವಾಗಿ ನಿಂತ ಆತನ ತಾಯಿ ಗ್ಲಾಡಿಸರಿಗೆ

5) ಡಾಕ್ಟರ್ ರಾಜಕುಮಾರ್ ಎಂಬ ಲೆಜೆಂಡ್ ನಟನ ಮುಗ್ಧತೆಗೆ ಬೇಲಿಯಾಗಿ ನಿಂತ ಮಡದಿ ಪಾರ್ವತಮ್ಮ ರಾಜಕುಮಾರ್ ಅವರಿಗೆ

6) ಕಾಳಿದಾಸನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ದೇವತೆಯಾಗಿ ನಿಂತ ವಿದ್ಯಾಧರೆ ಎಂಬ ಸುಂದರ ರಾಜಕುಮಾರಿಗೆ

7) ಶಿವಾಜಿ ಎಂಬ ಶಕ್ತಿಶಾಲಿ ಮಗನ ಮೂಲಕ ತಾನು ಕನಸು ಕಂಡ ಹಿಂದವಿ ಸಾಮ್ರಾಜ್ಯವನ್ನು ಕಡೆದು ನಿಲ್ಲಿಸಿದ ಮಹಾಮಾತೆ ಜೀಜಾಬಾಯಿಗೆ

8) ನರೇಂದ್ರ (ಸ್ವಾಮಿ ವಿವೇಕಾನಂದ) ಎಂಬ ಅಧ್ಯಾತ್ಮ ಶಿಖರಕ್ಕೆ ಒತ್ತಾಸೆಯಾಗಿ ನಿಂತ ಆತನ ತಾಯಿಯಾದ ಭುವನೇಶ್ವರಿ ದೇವಿಗೆ

9) ಅಂಕೋಲಾದ ಕಾಡುಗಳಲ್ಲಿ ವೃಕ್ಷರಾಶಿಯನ್ನು ಬೆಳೆಸಿ ಅದರ ಸಂರಕ್ಷಣೆ ಮಾಡಿ ನೇಪಥ್ಯದಲ್ಲಿ ನಿಂತ ತುಳಸಿ ಗೌಡ ಅವರಿಗೆ

10) ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಸಿರಾಗಿ ಬೆಳೆಸಿದ, ಸಂಗೀತದ ಕಂಪನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿರುವ ಭಾರತ ರತ್ನ ಡಾ. ಎಂ.ಎಸ್ ಸುಬ್ಬುಲಕ್ಷ್ಮಿ ಅವರಿಗೆ

11) ಮಹಿಳಾ ಕ್ರಿಕೆಟನ್ನು ಭಾರತದಲ್ಲಿ ಜನಪ್ರಿಯತೆಯ ಶಿಖರದ ತುದಿಗೆ ಮುಟ್ಟಿಸಿದ ಬಲಿಷ್ಠ ಕ್ರಿಕೆಟರ್ ಮಿತಾಲಿ ರಾಜ್ ಅವರಿಗೆ

12) ಭಾರತದ ಮೊದಲ ಮಹಿಳಾ ವೈದ್ಯೆಯಾಗಿ ಕೀರ್ತಿ ಪಡೆದು, ಪ್ರಾಕ್ಟೀಸ್ ಆರಂಭ ಮಾಡುವ ಮೊದಲೇ ನಿಧನರಾದ ಡಾಕ್ಟರ್ ಆನಂದಿಬಾಯಿ ಜೋಶಿ ಅವರಿಗೆ

13) ಸರಳತೆ, ಸಮಾಜಸೇವೆ ಇವುಗಳಿಗೆ ಅನನ್ಯ ಮಾದರಿ ಆದ ಮತ್ತು ತನ್ನ ಪತಿಯ ಪ್ರತಿ ಉದ್ಯಮದ ಕನಸಿಗೂ
ಒತ್ತಾಸೆಯಾಗಿ ನಿಂತ ಡಾಕ್ಟರ್ ಸುಧಾಮೂರ್ತಿ ಅವರಿಗೆ

14) ಎರಡೆರಡು ನೊಬೆಲ್ ಬಹುಮಾನಗಳನ್ನು ಪಡೆದು, ತನ್ನ ಸಂಶೋಧನೆಗಳ ಮೂಲಕ ಮಾನವ ಕುಲದ ಕಲ್ಯಾಣವನ್ನು ಹಾರೈಸಿದ ಮೇಡಂ ಕ್ಯೂರಿ ಅವರಿಗೆ

15) ಮದುವೆಯಾಗಲು ತನ್ನನ್ನು ಒತ್ತಾಯಿಸಿದ ಹಿಂದಿ ಸಿನೆಮಾದ ಶೋಮ್ಯಾನ್ ಆದ ರಾಜಕಪೂರ್ ಅವರ ಪ್ರಸ್ತಾಪವನ್ನು ಪ್ರೀತಿಯಿಂದ ನಿರಾಕರಿಸಿ, ಕೊನೆಯವರೆಗೂ ಆತನ ಪ್ರಿಯತಮೆ ಆಗಿ ಉಳಿದು ಆತನಿಂದ ಮಹಾ ಸಿನೆಮಾಗಳನ್ನು ಮಾಡಿಸಿದ ಮೇರು ನಟಿ ನರ್ಗೀಸ್ ಅವರಿಗೆ

16) ಹಾಡುವುದಕ್ಕಾಗಿಯೇ ಹುಟ್ಟಿ ಬಂದ, ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಭಾರತದ ಧ್ವನಿ ಎಂದೇ ಪ್ರಸಿದ್ಧಿ ಪಡೆದ ಮೇರು ಗಾಯಕಿ ಲತಾ ಮಂಗೇಷ್ಕರ್ ಅವರಿಗೆ

17) ಗಟ್ಟಿತನ, ದಿಟ್ಟತನ ಮತ್ತು ಕಠಿಣ ನಿರ್ಧಾರಗಳಿಗೆ ಹೆಸರು ಮಾಡಿದ, ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ

18) ತಾನೇ ಸ್ವತಃ ಅನಾಥೆ ಆಗಿದ್ದರೂ, ಭಿಕ್ಷೆ ಬೇಡಿ ಅನಾಥಾಶ್ರಮಗಳನ್ನು ಕಟ್ಟಿ ಸಾವಿರಾರು ಅನಾಥ ಮಕ್ಕಳ ತಾಯಿಯಾದ ಸಿಂಧುತಾಯಿ ಸಪ್ಕಲ್ ಅವರಿಗೆ

19) ರೆಕ್ಕೆ ಬಿಚ್ಚಿ ಹಾರಾಡುವ ತನ್ನ ಕನಸನ್ನು ಬಾಹ್ಯಾಕಾಶ ಯಾನದ ಮೂಲಕ ನನಸು ಮಾಡಲು ಹೊರಟು ಅರ್ಧದಲ್ಲಿಯೇ ಬೂದಿ ಆಗಿ ಹೋದ ಕಲ್ಪನಾ ಚಾವ್ಲಾ ಅವರಿಗೆ

20) ಇಡೀ ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪೋರ್ಚುಗೀಸರ ಜೊತೆಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಉಳ್ಳಾಲದ ರಾಣಿ ಅಬ್ಬಕ್ಕ ಅವರಿಗೆ

22) ‘ದ ವುಮನ್ ವಿದ್ ದ ಲ್ಯಾಂಪ್’ ಎಂದು ಎಲ್ಲರಿಂದ ಕರೆಸಿಕೊಂಡು ಯುದ್ಧದಲ್ಲಿ ಸಂತ್ರಸ್ತರಾದ ಸೈನಿಕರ ಆರೈಕೆಗೆ ಸಂಕಲ್ಪ ಮಾಡಿದ, ವಿಶ್ವದ ಮೊದಲ ನರ್ಸಿಂಗ್ ಕಾಲೇಜನ್ನು ತೆರೆದ ಫ್ಲಾರೆನ್ಸ್ ನೈಟೀಂಗೆಲ್ ಅವರಿಗೆ

23) ‘ಕಲಾ ಮಂಡಲಮ್’ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿ ಸಂಗೀತ ಮತ್ತು ನೃತ್ಯಗಳನ್ನು ಆರಾಧನೆ ಮಾಡಿದ ಮಹಾನ್ ಕಲಾವಿದೆ ರುಕ್ಮಿಣೀ ದೇವಿ ಆರುಂಡೇಲ್ ಅವರಿಗೆ

24) ಗಂಡಾಗಿ ಹುಟ್ಟಿ, ಒಳಗಿನ ಧ್ವನಿಗಳಿಗೆ ಕಿವಿಕೊಟ್ಟು ಮುಂದೆ ಹೆಣ್ಣಾಗಿ ಪರಿವರ್ತನೆ ಆಗಿ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ, ಕನ್ನಡದ ಜಾನಪದ ಜಗತ್ತನ್ನು ವಿಸ್ತರಿಸಿದ ಮಂಜಮ್ಮ ಜೋಗತಿ ಅವರಿಗೆ

25) ಶಂಕರನಾಗ್ ಅವರ ನೂರಾರು ಅಪೂರ್ಣ ಕನಸುಗಳನ್ನು ಅವರ ಮರಣದ ನಂತರ ಒಂದೊಂದಾಗಿ ಪೂರ್ತಿ ಮಾಡಿ ಕನ್ನಡದಲ್ಲಿ ರಂಗ ಸಂಸ್ಕೃತಿಯನ್ನು ಬೆಳೆಸಿದ ಅವರ ಪತ್ನಿ ಅರುಂಧತಿ ನಾಗ್ ಅವರಿಗೆ

26) ಕನ್ನಡದ ಅತಿಶ್ರೇಷ್ಠವಾದ ಕಾದಂಬರಿಗಳನ್ನು ಬರೆದು ಸಾರಸ್ವತ ಲೋಕಕ್ಕೆ ಪರಿಚಯ ಮಾಡಿದ ಕನ್ನಡದ ಮಹಾ ಲೇಖಕಿ ಎಂ ಕೆ ಇಂದಿರಾ ಅವರಿಗೆ.

27) ಬೆಂಗಳೂರಿನಲ್ಲಿ ಬಯೋಕಾನ್ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಅವರಿಗೆ

28) ಮಹಾಕವಿ ರನ್ನನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ಮತ್ತು ಬೆಂಬಲವಾಗಿ ನಿಂತ ಮಹಾ ದಾನಿ ಅತ್ತಿಮಬ್ಬೆಗೆ

29) ಭಾರತದ ಮೊದಲ ಐಪಿಎಸ್ ಅಧಿಕಾರಿ ಆಗಿ ಮೂಡಿಬಂದು, ತನಗೆ ದೊರೆತ ಅವಕಾಶಗಳನ್ನು ಅತ್ಯಂತ ಸಮರ್ಥವಾಗಿ ಬೆಳೆಸಿಕೊಂಡ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ

30) ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್‌ ಪದಕ ಸಿಗಲು ಸಾಧ್ಯವೇ ಇಲ್ಲ ಎಂಬ ಕೂಗಿನ ನಡುವೆಯೂ ಎಂಬತ್ತರ ದಶಕದಲ್ಲಿ ಭಾರತೀಯರಿಗೆ ಮೊದಲ ಬೆಳಕಿನ ಕಿಟಕಿ ತೆರೆದ ಪಯ್ಯೊಳಿ ಎಕ್ಸ್‌ಪ್ರೆಸ್ ಪಿ. ಟಿ. ಉಷಾ ಅವರಿಗೆ

ನಾವು ಬದುಕುವ ಜಗತ್ತನ್ನು ತನ್ನ ಅದಮ್ಯ ಶಕ್ತಿಗಳ ಮೂಲಕ ಶ್ರೀಮಂತಗೊಳಿಸಿದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ಇನ್ನೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅಷ್ಟರ ಮಟ್ಟಿಗೆ ಭಾರತವನ್ನು ಪುಣ್ಯಗರ್ಭೆ ಎಂದೇ ಕರೆಯಬಹುದು. ಅವರಿಗೆಲ್ಲ ಒಂದು ದಿನ ತಡವಾಗಿ ಆದರೂ ಮತ್ತೆ ಅವರದೇ ದಿನಗಳ ಶುಭಾಶಯಗಳು. ಸ್ತ್ರೀಯರನ್ನು ಗೌರವಿಸುವ ಎಲ್ಲರಿಗೂ ಎಲ್ಲ ದಿನವೂ ಮಹಿಳಾ ದಿನಗಳೇ ಎನ್ನುವುದು ನನ್ನ ನಂಬಿಕೆ.







































































error: Content is protected !!
Scroll to Top