ಮಾಲ್ಡೀವ್ಸ್ ದ್ವೀಪರಾಷ್ಟ್ರದ ಸಮೀಪದಲ್ಲಿ ಭಾರತದ ನೌಕಾನೆಲೆ ‘ಐಎನ್‌ಎಸ್‌ ಜಟಾಯು’ ಕಾರ್ಯಾರಂಭ

ನವದೆಹಲಿ : ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಹೇಳುತ್ತಿರುವ ಮಾಲ್ಡೀವ್ಸ್ ಗೆ ಭಾರತ ಪ್ರಬಲ ತಿರುಗೇಟು ನೀಡಿದ್ದು, ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ ‘ಐಎನ್‌ಎಸ್‌ ಜಟಾಯು’ ಕಾರ್ಯಾರಂಭ ಮಾಡಿದೆ. ಚೀನಾದ ಸಾಲ, ಮೂಲ ಸೌಕರ್ಯ ಯೋಜನೆ ಹಾಗೂ ಆರ್ಥಿಕ ನೆರವಿನ ಆಮಿಷಕ್ಕೆ ತುತ್ತಾಗಿರುವ ಮಾಲ್ಡೀವ್ಸ್ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ ಇಳಿದಿದ್ದು, ಭಾರತೀಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಗಡುವು ನೀಡಿದೆ.

ಮುಂಬರುವ ಆಪಾಯವನ್ನೂ ಲೆಕ್ಕಿಸದೇ ಮಾಲ್ಡೀವ್ಸ್ ತೋರುತ್ತಿರುವ ಹಠಮಾರಿ ತನಕ್ಕೆ ಈ ಹಿಂದೆ ಭಾರತದ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡುವ ಮೂಲಕ ಆಘಾತ ನೀಡಿದ್ದರು. ಪ್ರವಾಸೋಧ್ಯಮವನ್ನೇ ತನ್ನ ಆದಾಯದ ಕೇಂದ್ರವಾಗಿರಿಸಿಕೊಂಡಿರುವ ಮಾಲ್ಡೀವ್ಸ್ ಗೆ ಪ್ರಧಾನಿ ಮೋದಿ ನಡೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಭಾರತ ದೇಶದಿಂದ ತೆರಳುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿತ್ತು.

ಮಾಲ್ಡೀವ್ಸ್ ಸಮೀಪದಲ್ಲೇ ಭಾರತದ ನೌಕಾನೆಲೆ
ಇದೀಗ ಇದೇ ಮಾಲ್ಡೀವ್ಸ್ ಮತ್ತೊಂದು ಪ್ರಬಲ ಹೊಡೆತ ನೀಡಿರುವ ಭಾರತ ಮಾಲ್ಡೀವ್ಸ್‌ನಿಂದ ಕೂಗಳತೆ ದೂರದಲ್ಲಿ ತನ್ನ ನೌಕಾನೆಲೆ ಆರಂಭಿಸಿದೆ. ಮಾಲ್ಡೀವ್ಸ್‌ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು ‘ಐಎನ್‌ಎಸ್‌ ಜಟಾಯು’ ನೌಕಾನೆಲೆಯನ್ನು ಆರಂಭಿಸಿದ್ದು, ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್.‌ ಹರಿಕುಮಾರ್‌ ಅವರು ಐಎನ್‌ಎಸ್‌ ಜಟಾಯು ನೌಕಾನೆಲೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದರ ಜೊತೆಗೆ ಹಲವು ಕಾರಣಗಳಿಂದಾಗಿ ಐಎನ್‌ಎಸ್‌ ಜಟಾಯು ಪ್ರಾಮುಖ್ಯತೆ ಪಡೆದಿದೆ” ಎಂದು ತಿಳಿಸಿದರು.

ಚೀನಾಗೆ ತಲೆನೋವು?
ದಕ್ಷಿಣ ಹಿಂದೂಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾ, ಇದೇ ಕಾರಣಕ್ಕೆ ದ್ವೀಪರಾಷ್ಟ್ರ ಮಾಲ್ಡೀವ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಜಾಗತಿಕ ವ್ಯಾಪಾರದ ಬಹುಪಾಲು ವ್ಯಾಪಾರ ವಹಿವಾಟು ನಡೆಯುವುದೇ ಈ ಹಿಂದೂ ಮಹಾಸಾಗರದ ಮಾರ್ಗದಲ್ಲಿ. ಈ ಮಾರ್ಗದಲ್ಲಿ ನಿಯಂತ್ರಣ ಸಾಧಿಸಿದರೆ ಚೀನಾ ಜಗತ್ತಿನ ದೊಡ್ಡಣ್ಣ ಆಗುತ್ತೇನೆ ಎಂಬ ಉತ್ಸಾಹದಲ್ಲಿದೆ. ಇದೇ ಕಾರಣಕ್ಕೆ ಸಾಲ, ಮೂಲ ಸೌಕರ್ಯ ಅಭಿವೃದ್ದಿ ಮತ್ತು ಇತರೆ ಆಮಿಷಗಳನ್ನು ನೀಡಿ ಮಾಲ್ಡೀವ್ಸನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿದೆ. ಅದರ ವ್ಯೂಹದ ಪರಿಣಾಮವಾಗಿಯೇ ಇದೀಗ ಮಾಲ್ಡೀವ್ಸ್ ತನ್ನ ದೇಶದಲ್ಲಿರುವ ಭಾರತೀಯ ಸೈನಿಕರನ್ನು ವಾಪಸ್ ಕರೆಸಿಕೊಳ್ಳಿ ಎಂದು ಪಟ್ಟು ಹಿಡಿದಿದೆ.

ಭಾರತ ತಿರುಗೇಟು ನೀಡಿದ್ದು, ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು ‘ಐಎನ್‌ಎಸ್‌ ಜಟಾಯು’ ಎಂಬ ನೌಕಾನೆಲೆಯನ್ನು ಆರಂಭಿಸಿದೆ. ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಲಕ್ಷದ್ವೀಪದಲ್ಲೇ ನೌಕಾಪಡೆಯು ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ.

ಭಾರತದ ನೌಕಾನೆಲೆ ‘INS Jatayu‘ ಕಾರ್ಯಾರಂಭ
ಭಾರತ ಮತ್ತು ಚೀನಾ ನಡುವಿನ ತಿಕ್ಕಾಟದ ಪ್ರಮುಖ ಕೇಂದ್ರ ಬಿಂದು ಹಿಂದೂ ಮಹಾಸಾಗರ.. ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಈ ಐಎನ್ ಎಸ್ ಜಟಾಯು ನೆರವಾಗುತ್ತದೆ. ಈ ನೌಕಾನೆಲೆಯಿಂದ ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ತಡೆಗಟ್ಟಲು ಅನುಕೂಲವಾಗುತ್ತದೆ. ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣಕ್ಕೆ ಇದು ನೆರವಾಗಲಿದ್ದು, ಒಂದು ವೇಳೆ ಯಾವುದೇ ರೀತಿಯ ಕ್ಷಿಪ್ರವಾಗಿ ಡ್ರೋನ್‌, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಸಹಕಾರಿಯಾಗುತ್ತದೆ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದಾಗಿದೆ. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಲು ನೆರವಾಗುತ್ತದೆ. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಲು ಈ ನೌಕಾನೆಲೆ ನೆರವಾಗಲಿದ್ದು, ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್‌ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು ನೀಡಲು ಸಹಕಾರಿಯಾಗುತ್ತದೆ.

ರಾಮಾಯಣದ ಜಟಾಯು ಹೆಸರನ್ನೇ ಲಕ್ಷದ್ವೀಪದ ನೌಕಾನೆಲೆಗೆ ಇಡಲಾಗಿದೆ. ರಾವಣನು ಸೀತೆಯನ್ನು ಅಪಹರಣ ಮಾಡಲು ಮುಂದಾದಾಗ ಆತನನ್ನು ಮೊದಲು ತಡೆಯಲು ಯತ್ನಿಸಿದ್ದೇ ಜಟಾಯು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೀತೆಯ ರಕ್ಷಣೆಗೆ ಮುಂದಾದ ಜಟಾಯು ನಿಸ್ವಾರ್ಥವು ಮಾದರಿಯಾಗಿದೆ. ಹಾಗಾಗಿ, ದೇಶದ ರಕ್ಷಣೆ, ಸಮುದ್ರ ಪ್ರದೇಶದಲ್ಲಿ ಹೆಚ್ಚಿನ ನಿಗಾ, ಸ್ವಾರ್ಥ ಲೆಕ್ಕಿಸದೆ ಹೋರಾಟ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ನೌಕಾನೆಲೆಗೆ ಜಟಾಯು ಎಂದು ಹೆಸರಿಡಲಾಗಿದೆ.





























































































error: Content is protected !!
Scroll to Top