ಬೆಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಎನ್ಐಎ ವಿಶೇಷ ನ್ಯಾಯಾಲಯ ಮೊಹಮ್ಮದ್ ಶಾರಿಕ್ಗೆ 10 ವರ್ಷ ಜೈಲು, 94 ಸಾವಿರ ರೂ. ದಂಡ ವಿಧಿಸಿದೆ. 2022ರ ನ. 19ರಂದು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಎಂಬಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಶಾರಿಕ್ ಬ್ಯಾಗ್ನಲ್ಲಿದ್ದ ಪ್ರೆಶರ್ ಕುಕ್ಕರ್ನಲ್ಲಿ ಬಾಂಬ್ ಇತ್ತು. ಸ್ಫೋಟದ ತೀವ್ರತೆಗೆ ಆಟೋಗೆ ಬೆಂಕಿ ಹೊತ್ತಿಕೊಂಡಿತ್ತು.
ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಘಟನೆಯ ಹಿಂದಿರುವ ಭಯೋತ್ಪಾದನಾ ಜಾಲದ ಗಂಭೀರತೆಯನ್ನು ಅರಿತು, ಅನಂತರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಲಾಯಿತು. ಶಾರಿಕ್ನ ಹಿಂದಿದ್ದ ನೆಟ್ವರ್ಕ್, ಆತನಿಗೆ ಹಣಕಾಸು ನೆರವು ನೀಡಿದವರು ಮತ್ತು ಸಹಕರಿಸಿದ ಮಾಜ್ ಮುನೀರ್, ಸೈಯದ್ ಯಾಸಿನ್ನನ್ನು ಎನ್ಐಎ ಬಂಧಿಸಿ ವಿಚಾರಣೆ ನಡೆಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬೃಹತ್ ಚಾರ್ಜ್ಶೀಟ್ ಕೂಡ ಸಲ್ಲಿಸಿತ್ತು. ಬೆಂಗಳೂರು ಎನ್ಐಎ ನ್ಯಾಯಾಲಯ ಸದ್ಯ 16 ಮಂದಿಯನ್ನು ಆರೋಪಿಗಳು ಎಂದು ತೀರ್ಪು ನೀಡಿದೆ.
ಈ ಸ್ಫೋಟದ ಪ್ರಮುಖ ರೂವಾರಿ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರಿಕ್. ಈತ ಪ್ರೇಮ್ರಾಜ್ ಎಂಬ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದ. ಅಲ್ಲಿಯೇ ಆನ್ಲೈನ್ ಮೂಲಕ ಕುಕ್ಕರ್ ಬಾಂಬ್ ತಯಾರಿಸಲು ತರಬೇತಿ ಪಡೆದು, ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದ. ಸ್ಫೋಟದಲ್ಲಿ ಈತನಿಗೂ ಶೇ. 40 ರಷ್ಟು ಸುಟ್ಟ ಗಾಯವಾಗಿತ್ತು.















































