ಫೋನ್ ರಿಂಗ್ನಿಂದ ಆತ್ಮಹತ್ಯೆ ಮಾಡಿಕೊಂಡ ಜಾಗ ಪತ್ತೆ
ಬಂಟ್ವಾಳ: ಭಗ್ನಪ್ರೇಮಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ. ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ದಿ. ಸುಂದರ ಎಂಬವರ ಮಗ ಸಚಿನ್ ಜೀವನದಲ್ಲಿ ಜಿಗುಪ್ಸೆಗೊಂಡು ಚೀಟಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಚಿನ್ ಬಂಟ್ವಾಳದಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅ. 18ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು. ಫೋನ್ ಮಾಡಿದಾಗ ರಿಂಗ್ ಆಗುತ್ತಿತ್ತೆ ವಿನಹ ರಿಸೀವ್ ಮಾಡದೆ ಇರುವಾಗ ಬಂಟ್ವಾಳದ ಕಾಮಾಜೆ ಮಾವನ ಮನೆಯರವಲ್ಲಿ ವಿಚಾರಿಸಿದ್ದಾರೆ. ಅವರು ಹುಡುಕಿದಾಗ ಮುಂಜಾನೆ ಸುಮಾರು 3 ಗಂಟೆಯ ವೇಳೆ ಈತನ ಸ್ಕೂಟರ್ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಮೈದಾನದ ಬಳಿ ನಿಲ್ಲಿಸಲಾಗಿತ್ತು. ಆದರೆ ಸಚಿನ್ ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಫೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಫೋನ್ ರಿಂಗ್ ಕೇಳುತ್ತಿತ್ತು. ಅಲ್ಲಿ ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದ. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂಬ ಈತ ಚೀಟಿಯಲ್ಲಿ ಬರೆದಿದ್ದ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ.















































































