ಚೆನ್ನೈ : ಎನ್ಡಿಎ ಮೈತ್ರಿ ಕೂಟದಿಂದ ಹೊರಬರಲು ತಮಿಳುನಾಡಿನ ಎಐಎಡಿಎಂಕೆ ಪಕ್ಷ ತೀರ್ಮಾನಿಸಿದ್ದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಚೆನ್ನೈನ ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಂಸದರು, ಶಾಸಕರು ಹಾಗೂ ಜಿಲ್ಲಾ ಪ್ರಮುಖರ ಸಭೆ ನಡೆದಿದ್ದು, ಈ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯ್ತು ಎಂದು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕೆ. ಪಿ. ಮುನುಸ್ವಾಮಿ ಮಾಹಿತಿ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಎಐಎಡಿಎಂಕೆ ಪಕ್ಷ ಈ ನಿಲುವು ಕೈಗೊಂಡಿದೆ.
ಎಐಎಡಿಎಂಕೆ ಸಂಸ್ಥಾಪಕ, ಚಿತ್ರನಟ ಎಂ.ಜಿ. ರಾಮಚಂದ್ರನ್ ಅವರ ಮಾರ್ಗದರ್ಶಕ ದಿ. ಅಣ್ಣಾದುರೈ ಮತ್ತು ಜಯಲಲಿತಾ ಅವರ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅಣ್ಣಾಮಲೈ ಕ್ಷಮೆ ಕೇಳಬೇಕು, ಇಲ್ಲವಾದ್ರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಎಐಎಡಿಎಂಕೆ ಆಗ್ರಹಿಸಿತ್ತು. ಇಲ್ಲದಿದ್ದಲ್ಲಿ ಎನ್ಡಿಎ ಮೈತ್ರಿ ಕೂಟದಿಂದಲೇ ಹೊರಬರುವುದಾಗಿಯೂ ಹೇಳಿತ್ತು. ಬಿಜೆಪಿ ನಾಯಕರು ಎಐಎಡಿಎಂಕೆ ನಾಯಕರ ಮನವೊಲಿಸುವಲ್ಲಿ ವಿಫಲರಾಗಿದ್ದು, ಎಐಎಡಿಎಂಕೆ ಪಕ್ಷವು ಸರ್ವ ಸದಸ್ಯರ ಸಭೆ ನಡೆಸಿ ಎನ್ಡಿಎ ಮೈತ್ರಿ ಕೂಟದಿಂದ ಹೊರಗೆ ಬರುವ ನಿರ್ಣಯ ಪ್ರಕಟಿಸಿದೆ.