ಬೆಂಗಳೂರು : ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಸೆ.26 ರಂದು ಬೆಂಗಳೂರು ಸಂಪೂರ್ಣ ಬಂದ್ ಕರೆ ನೀಡಲಾಗಿದೆ. ಅಲ್ಲದೆ ಸೆ.29 ರಂದು ರಾಜ್ಯ ಬಂದ್ಗೆ ಕರೆ ನೀಡಲಾಗಿದೆ. ಬಂದ್ ಹಿನ್ನಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಅವರು ಸೆ.25 ರಂದು ಆದೇಶ ಹೊರಡಿಸಿದ್ದಾರೆ.
ಎರಡು ಬಂದ್ಗಳು ರೈತರು ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯವನ್ನು ಪ್ರತಿಬಿಂಬಿಸುತ್ತಿವೆ ಮತ್ತು ಯಾವ ದಿನದ ಬಂದ್ಗೆ ಯಾರು ಬೆಂಬಲ ನೀಡುತ್ತಾರೆ ಮತ್ತು ನಾಳೆ ಯಾವ ಸೇವೆಗಳು ಲಭ್ಯವಿರುತ್ತವೆ ಎಂಬ ಗೊಂದಲಕ್ಕೂ ಕಾರಣವಾಗಿದೆ. ಇದರ ನಡುವೆ ನಾಳೆಯ ಬಂದ್ಗೆ ಬೆಂಬಲ ನೀಡುವುದಿಲ್ಲ. ಆದರೆ ಸೆ.29 ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಓಲಾ-ಉಬರ್ ಚಾಲಕರ ಸಂಘ ಹೇಳಿದೆ. ಬಿಎಂಟಿಸಿ ಬಸ್ಗಳು ಪರಿಸ್ಥಿತಿ ನೋಡಿಕೊಂಡು ಸಂಚಾರ ಆರಂಭಿಸಲಿವೆ. ಆದರೆ ನಾಳೆ ನಮ್ಮ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಅರ್ಸಿಎಲ್ ತಿಳಿಸಿದೆ. ನಾಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು, ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.