ರಾವಣ, ಕಂಸನಿಂದಲೇ ಸನಾತನ ಧರ್ಮ ಅಳಿಸಲಾಗಲಿಲ್ಲ : ಯೋಗಿ ಆದಿತ್ಯನಾಥ್‌

ಅಧಿಕಾರ ದಾಹದ ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಅನಗತ್ಯ ವಿವಾದ ಎಂದು ಟ್ವೀಟ್‌

ಲಖನೌ : ರಾವಣನ ದುರಹಂಕಾರ ಸನಾತನ ಧರ್ಮವನ್ನು ಅಳಿಸಲಾಗಲಿಲ್ಲ. ಕಂಸನ ಘರ್ಜನೆ ಧರ್ಮವನ್ನು ಅಲುಗಾಡಿಸಲಾಗಲಿಲ್ಲ. ಬಾಬರ್‌ ಮತ್ತು ಔರಂಗಜೇಬನ ದೌರ್ಜನ್ಯಗಳೂ ಸನಾತನ ಧರ್ಮವನ್ನು ಏನೂ ಮಾಡಲು ಆಗಲಿಲ್ಲ. ಈಗ ಈ ಅಧಿಕಾರ ದಾಹವುಳ್ಳ ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಅಳಿಸಿಹಾಕಲು ಸಾಧ್ಯವೇ? ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಅವರು ಅನಾದಿ ಕಾಲದಿಂದಲೂ ಸನಾತನ ಧರ್ಮದ ಮೇಲೆ ಹಲವು ದಾಳಿಗಳಾಗಿವೆ. ಆದರೆ ಧರ್ಮಕ್ಕೆ ಹಾನಿ ಮಾಡಲು ಅವುಗಳಿಂದ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಪರವಾಲಂಬಿಗಳಿಂದ ಈಗಲೂ ಅದು ಸಾಧ್ಯವಿಲ್ಲ ಎಂದಿದ್ದಾರೆ.
ಸನಾತನ ಧರ್ಮದ ಮೇಲೆ ದುರುದ್ದೇಶಪೂರಿತ ದಾಳಿ ನಡೆಸುವ ಮೂಲಕ ಮಾನವೀಯತೆಯನ್ನೇ ತೊಂದರೆಗೆ ಸಿಲುಕಿಸವ ಪ್ರಯತ್ನ ನಡೆಸಲಾಗುತ್ತಿದೆ. ಸನಾತನ ಧರ್ಮ ಸೂರ್ಯನಂತೆ ಶಕ್ತಿಯ ಮೂಲ. ಸೂರ್ಯನತ್ತ ಉಗಿಯುವ ಆಲೋಚನೆಯನ್ನು ಒಬ್ಬ ಮೂರ್ಖನಷ್ಟೇ ಮಾಡಬಲ್ಲ. ವಾಸ್ತವದಲ್ಲಿ ತನ್ನ ಮುಖದ ಮೇಲೇ ಬೀಳುತ್ತದೆ. ಇಂಥ ತಪ್ಪುಗಳಿಂದಾಗಿ ಅವರ ಮುಂದಿನ ತಲೆಮಾರುಗಳು ಅವಮಾನದಿಂದ ಬದುಕಬೇಕಾಗಲಿದೆ. ಭಾರತದ ಭವ್ಯ ಪರಂಪರೆ ಕುರಿತು ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು ಎಂದು ಯೋಗಿ ಹೇಳಿದ್ದಾರೆ.
ದೇವರನ್ನು ಅಳಿಸಿಹಾಕಲು ಹೊರಟವರು ಅವರೇ ನಾಶವಾಗಿದ್ದಾರೆ. 500 ವರ್ಷಗಳ ಹಿಂದೆಯೂ ಸನಾತನ ಧರ್ಮವನ್ನು ಅವಮಾನಿಸಲಾಗಿತ್ತು. ಆದರೆ ಇಂದು ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ದೇಶದ ಪ್ರಗತಿಯಲ್ಲಿ ಅಡ್ಡಗಾಲು ಹಾಕುತ್ತಿವೆ. ಆದರೆ ಅವುಗಳ ಪ್ರಯತ್ನ ಕೈಗೂಡದು ಎಂದು ಕಿಡಿಯಾಡಿದ್ದಾರೆ.































































































































































error: Content is protected !!
Scroll to Top