ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಲ್ಲಾ ನೌಕರರಿಗೆ ಸಂಬಳ ಸಹಿತ ರಜೆಯನ್ನು ನೀಡುವಂತೆ ಈಗಾಗಲೇ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ನೌಕರರಿಗೆ ಮತದಾನದ ದಿನ ಮೇ 10 ರಂದು ರಜೆ ಘೋಷಿಸಲಾಗಿದೆ. ಆದರೆ, ಇದೆ ಸೌಲಭ್ಯ ರಾಜ್ಯದ ಖಾಸಗಿ ಸಂಸ್ಥೆಗಳಿಗೆ ಅದರಲ್ಲೂ ಐಟಿ ವಲಯ, ಹಣಕಾಸು, ತಾಂತ್ರಿ ಸೇರಿದಂತೆ ಎಲ್ಲಾ ಖಾಸಗಿ ಕಂಪನಿಗಳಿಗೆ ಅನ್ವಯ ಆಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
ಈ ಎಲ್ಲಾ ಗೊಂದಲಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿ ನಾಥ್ ಅವರು, ನೌಕರರು ಮತದಾರರಾಗಿರಲಿ ಅಥವಾ ಅಲ್ಲದೇ ಇರಲಿ ಎಲ್ಲರಿಗೂ ಸಂಬಳ ಸಹಿತ ರಜೆ ಇರಲಿದೆ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ಇದು ಅನ್ವಯ ಆಗಲಿದೆ. ಆದರೆ, ಅತ್ಯಗತ್ಯ ಸೇವಾ ವಲಯದಲ್ಲಿ ಬರುವ ಕಾರ್ಖಾನೆಗಳು ಹಾಗೂ ಉದ್ಯಮಗಳಿಗೆ ಈ ವಿಚಾರದಲ್ಲಿ ಸಡಿಲಿಕೆ ಇದೆ. ಮತದಾರರಲ್ಲದ ನೌಕರರನ್ನು ಬಳಸಿಕೊಂಡು ಅವರು ತಮ್ಮ ಕಾರ್ಯಾಚರಣೆ ಮುಂದುವರೆಸಬಹುದು ಎಂದು ಅವರು ಹೇಳಿದ್ದಾರೆ.
1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 135ಬಿ ಪ್ರಕಾರ ಮತದಾನದ ದಿನ ಎಲ್ಲ ನೌಕರರಿಗೆ ಸಂಬಳ ಸಹಿತ ರಜೆ ನೀಡಬೇಕು. ಯಾವುದೇ ವ್ಯಕ್ತಿ ಯಾವುದೇ ಉದ್ಯಮ, ವ್ಯವಹಾರ, ಕೈಗಾರಿಕೆಯಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಮತವನ್ನು ಚಲಾವಣೆ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಜೆಯನ್ನು ನೀಡಲಾಗಿರುತ್ತದೆ. ಒಂದು ವೇಳೆ ಯಾವುದೇ ಸಂಸ್ಥೆ ಈ ಕಾಯ್ದೆಯ ಪ್ರಕಾರ ತಮ್ಮ ನೌಕರರಿಗೆ ಮತದಾನಕ್ಕೆ ಅವಕಾಶ ನೀಡಿಲ್ಲವಾದ್ರೆ ಅವರಿಗೆ ದಂಡ ವಿಧಿಸಬಹುದಾಗಿದೆ. 500 ರೂ.ಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಬಹುದು ಎಂದು ತುಷಾರ್ ಗಿರಿ ನಾಥ್ ವಿವರಿಸಿದರು.

ಆದ್ರೆ ಈ ನಿಯಮಗಳ ಅತ್ಯಗತ್ಯ ಸೇವಾ ವಲಯ, ಉದ್ಯಮಕ್ಕೆ ಅನ್ವಯ ಆಗೋದಿಲ್ಲ. ಒಂದು ವೇಳೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ಅದರಿಂದ ಅಪಾಯ ಎದುರಾಗಬಹುದಾದರೆ ಅಂಥವರು ಈ ನಿಯಮದಿಂದ ಹೊರಗೆ ಇರುತ್ತಾರೆ. ಹೊರ ರಾಜ್ಯದ ಕಾರ್ಮಿಕರು, ಕರ್ನಾಟಕದಲ್ಲಿ ಮತದಾನ ಮಾಡದವರನ್ನು ಸದರಿ ಕಂಪನಿಗಳು ಮತದಾನದ ದಿನವೂ ಕಾರ್ಯ ನಿರ್ವಹಿಸುವಂತೆ ಹೇಳಬಹುದು. ಮತದಾನ ಮಾಡಲು ಅವಕಾಶ ಇರುವವರಿಗೆ ಅವರ ಹಕ್ಕನ್ನು ಚಲಾವಣೆ ಮಾಡಲು ಅವಕಾಶ ಮಾಡಿಕೊಂಡು ಹೊರ ರಾಜ್ಯದ ಕಾರ್ಮಿಕರಿಂದ ಕೆಲಸ ತೆಗೆಸಬಹುದು ಎಂದು ತುಷಾರ್ ಗಿರಿ ನಾಥ್ ಅವರು ವಿವರಿಸಿದರು.




































