ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ : ಮುಖ್ಯಮಂತ್ರಿ ಬೊಮ್ಮಾಯಿ

ಉಡುಪಿ : ಕನ್ನಡ ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್‌ ಇಂಜಿನ್‌ ಸರಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೀನುಗಾರರಿಗೆ ಅಗತ್ಯವಿರುವ ಹೆಚ್ಚುವರಿ ಸೀಮೆ ಎಣ್ಣೆ ಒದಗಿಸಲು ಬಿಜೆಪಿ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಮತ್ತು ಮೀನುಗಾರರಿಗೆ ಸುಸಜ್ಜಿತ ಮನೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದರು. ಅವರು ನ.7 ರಂದು ಕಾಪುವಿನಲ್ಲಿ ಜರುಗಿದ ಜನಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರವು ಬಹಳ ಕೊಡುಗೆ ನೀಡಿದೆ. ಕರಾವಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಸಿ.ಆರ್.ಝಡ್‌ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಸಾಗರ್‌ ಮಾಲಾ ಯೋಜನೆಗೆ ರೂ.1774 ಕೋಟಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆ ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಕರಾವಳಿಯಲ್ಲಿ ಇಂದು ಕಾಪು ಕ್ಷೇತ್ರದಿಂದ ಪ್ರಾರಂಭವಾಗಿದೆ. ನಾವು ಪ್ರತಿಯೊಂದು ಕ್ಷೇತ್ರವನ್ನೂ ತಲುಪಲಿದ್ದೇವೆ ಮತ್ತು ಅಲ್ಲೆಲ್ಲ ಪಕ್ಷದ ಹಾಗೂ ಜನರ ಸಂಘಟನೆಯನ್ನು ಮಾಡಲಿದ್ದೇವೆ. ಜನಸಂಕಲ್ಪ ಯಾತ್ರೆ ಪ್ರಾರಂಭವಾದ ಬಳಿಕ ಕಾರ್ಯಕರ್ತರಲ್ಲೂ ಹೊಸ ಉತ್ಸಾಹ ಮೂಡುತ್ತಿದೆ. ಯಾತ್ರೆ ಮುಗಿದ ಬಳಿಕ ಉತ್ತರ ಮತ್ತು ದಕ್ಷಿಣ ಭಾಗದಿಂದ ರಥಯಾತ್ರೆ ಪ್ರಾರಂಭಿಸಲಿದ್ದು ಎಲ್ಲ 224 ಕ್ಷೇತ್ರಗಳನ್ನು ಕೂಡ ಈ ಮೂಲಕ ಮುಟ್ಟಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ವಿ. ಸುನೀಲ್‌ ಕುಮಾರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್.‌ ಮೆಂಡನ್‌, ಯಶ್‌ಪಾಲ್‌ ಸುವರ್ಣ, ಪಕ್ಷದ ವಿವಿಧ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.









































































































error: Content is protected !!
Scroll to Top