ಬಿಜೆಪಿಯ ಕೋಮುವಾದಿ, ಅಭಿವೃದ್ಧಿ ವಿರೋಧಿ, ಸರ್ವಾಧಿಕಾರಿ ಆಡಳಿತದ ಪರಿಣಾಮವಾಗಿ ದೇಶದ ಪ್ರಜಾತಂತ್ರ ಒಡೆದ ಕನ್ನಡಿಯಂತಾಗಿದ್ದು ಅದನ್ನು ಮರುಜೋಡಿಸುವುದೇ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯ ಗುರಿ. ಇದು ಧರ್ಮದ ಹೆಸರಲ್ಲಿ ದೇಶದ ಪರಂಪರಾನುಗತ ಸೌಹಾರ್ಧಕ್ಕೆ ಉರಿ ಹಚ್ಚುತ್ತಿರುವ ಬಿಜೆಪಿ ನಾಯಕರಿಗೆ ನುಂಗಲಾಗದ ತುತ್ತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಅಂದು ಧರ್ಮದ ಹೆಸರಲ್ಲಿ ದೇಶ ಒಡೆದ ಬಿಜೆಪಿ ಇಂದು ಮತ್ತೆ ಹಿಂದುತ್ವದ ಹೆಸರಲ್ಲಿ ದೇಶ ವಿಭಜಿಸುತ್ತಿದೆ. ದೇಶ ವಿಭಜನೆಗೆ ಜವಾಹರಲಾಲ್ ನೆಹರು ಕಾರಣವೆಂದು ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆಯನ್ನು ಟೀಕಿಸುವ ಬಿಜೆಪಿಯ ತಥಾಕಥಿತ ನಾಯಕರು ಹಾಗೂ ಅವರ ಪಕ್ಷದ ತಲೆಯಾಳುಗಳಿಗೆ ಇತಿಹಾಸದ ಪರಿಜ್ಞಾನವಿಲ್ಲ. ದೇಶ ವಿಭಜನೆಗೆ ತಳಪಾಯ ಹಾಕಿದವರೆ ಇವರ ಪಾಲಿನ ಸ್ವಾತಂತ್ರ್ಯ ಸೇನಾನಿ, ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿ ಬದುಕು ಕಟ್ಟಿಕೊಂಡ ವಿ.ಡಿ ಸಾವರ್ಕರ್ ಎನ್ನುವ ವಾಸ್ತವ ಸತ್ಯ ಬಹುಶಃ ಇವರಿಗೆ ತಿಳಿದಿಲ್ಲ.
ಮಹಮ್ಮದಾಲಿ ಜಿನ್ನಾರವರ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಬದ್ಧತೆ ತೋರಿದ್ದ ಸಾವರ್ಕರ್ ಅಹಮ್ಮದಾಬಾದ್ ನಲ್ಲಿ ನಡೆದ 19ನೇ ಹಿಂದು ಮಹಾಸಭಾ ಅಧಿವೇಶನದಲ್ಲಿ ಮುಂದಿನ ಸ್ವತಂತ್ರ ಭಾರತ ಧರ್ಮದ ತಳಹದಿಯ ಮೇಲೆ ವಿಭಜನೆ ಆಗಬೇಕಾದುದು ಅನಿವಾರ್ಯವೆಂದು ಪ್ರತಿಪಾದಿಸಿ ದೇಶ ವಿಭಜನೆಗೆ ಪೀಠಿಕೆ ಹಾಕಿದ್ದರು. ಬಹುಶ ಈ ಕಹಿಸತ್ಯವನ್ನು ಅರಗಿಸುವ ಶಕ್ತಿ ಇಲ್ಲದೆ ಇದಕ್ಕೆಲ್ಲ ಗಾಂಧಿ ನೆಹರೂ ಕಾರಣವೆಂದು ವರಸೆ ಹಚ್ಚುವುದು ಬಿಜೆಪಿ ತಲೆಯಾಳುಗಳ ಛಾಳಿಯಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಭಾರತ್ ಜೋಡೋ ಪಾದಯಾತ್ರೆ ದೇಶವಾಸಿಗಳ ಮನಸ್ಸು ಮನಸ್ಸುಗಳನ್ನು ಬೆಸೆದು ದೇಶದ ವರ್ತಮಾನದ ಪರಿಸ್ಥಿತಿಯ ಸತ್ಯ ದರ್ಶನ ಮಾಡಿಸಿ, ದೇಶದ ಸಂವಿಧಾನದತ್ತ ಪ್ರಜಾ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲಿದೆ. ಪರಿಣಾಮವಾಗಿ ಜನರಲ್ಲಿ ಜಾಗೃತಿ ಉಂಟಾಗಿ ರಾಷ್ಟ್ರೀಯ ಚಿಂತನೆಯೊಂದು ಆವಿಷ್ಕಾರಗೊಳ್ಳಲಿದೆ. ದೇಶದಲ್ಲಿ ಈ ನವಚಿಂತನೆ ಮುಂದಿನ ದಿನಗಳಲ್ಲಿ ಬಿಜೆಪಿಯ ಅಧಿಕಾರಶಾಹಿ ಹಪಹಪಿಗೆ ಉರುಳಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಪ್ರಜಾತಂತ್ರ ಒಡೆದ ಕನ್ನಡಿಯಾಗಿದೆ : ಬಿಪಿನ್ ಚಂದ್ರಪಾಲ್

































