ನ. 28ರಂದು ಕಾರ್ಕಳದಲ್ಲಿ “ಶಂಕರಾಭರಣ – ಶಂಕರನಾಗ್ ಸ್ಮರಣೆ”

ಕನ್ನಡದ ಕೀರ್ತಿ ಪಡೆದ ಕಲಾವಿದ, ನಟ, ನಿರ್ದೇಶಕ, ಮಾನವತಾವಾದಿ ಮತ್ತು ನಾಡಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಶಂಕರನಾಗ್ ಅವರನ್ನು ನೆನಪಿಸುವ ಮತ್ತು ಶ್ರದ್ಧಾಂಜಲಿ ಅರ್ಪಿಸುವ “ಶಂಕರಾಭರಣ- ಇದು ಶಂಕರನ ಸ್ಮರಣೆ”ಎಂಬ ಶೀರ್ಷಿಕೆಯ ಕಾರ್ಯಕ್ರಮವು ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯ ಶಾಂತಾರಾಮ ಕಾಮತ್ ನೆನಪಿನ ಸಭಾಂಗಣದಲ್ಲಿ ನ. 28ರಂದು ಸಂಜೆ 4 ಕ್ಕೆ ಜರಗಲಿದೆ. ನವಂಬರ್ ತಿಂಗಳ ಕನ್ನಡ ಹಬ್ಬದ ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಡೆಯುವ ಈ ವಿಶೇಷ ಕಾರ್ಯಕ್ರಮವನ್ನು ಕಾರ್ಕಳದ ಶ್ರೀಮದ್ಭುವನೇಂದ್ರ ಪ್ರೌಢಶಾಲೆಯ ಸಂಚಾಲಕರಾದ ಎಸ್. ನಿತ್ಯಾನಂದ ಪೈ ಅವರು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶಂಕರನಾಗ್ ಅವರ ಜನಪ್ರಿಯ ಸಿನೆಮಾಗಳ ಪ್ರಸಿದ್ಧ ಹಾಡುಗಳನ್ನು ಶ್ರೇಷ್ಠ ಕಲಾವಿದರು ಹಾಡಲಿದ್ದು, ಅದರ ಜೊತೆಗೆ ಶಂಕರನಾಗ್ ಅವರ ಅಸಾಧಾರಣ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ದೃಶ್ಯ ವೈಭವ ಮತ್ತು ಮಾತುಕತೆಗಳು ವೇದಿಕೆ ಏರಲಿವೆ. ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್ ಅವರು ಶಂಕರನಾಗ್ ನೆನಪಿನ ಬುತ್ತಿಯನ್ನು ಬಿಚ್ಚಿ ಕೊಡಲಿದ್ದಾರೆ. ಶಂಕರನಾಗ್ ಚಿತ್ರಗಳ ಆಯ್ದ ಹಾಡುಗಳ ಸೌಂದರ್ಯವನ್ನು ರಾಜೇಂದ್ರ ಭಟ್ ಕೆ. ಅವರು ಕಟ್ಟಿ ಕೊಡಲಿದ್ದಾರೆ. ಕಾರ್ಕಳದ ಶಂಕರನಾಗ್ ಅಭಿಮಾನಿ ಬಳಗ, ಕಾರ್ಕಳ ಮತ್ತು ಹೆಬ್ರಿಯ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಕನ್ನಡದ ಮತ್ತು ಶಂಕರನಾಗ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿ ಮಾಡಿದ್ದಾರೆ.















































































































































error: Content is protected !!
Scroll to Top