ಕಾರ್ಕಳ : ಕಾರ್ಕಳದಲ್ಲಿ ಸ್ಥಳೀಯ ಮತ್ತು ಇತರ ವಾರ್ತೆಗಳನ್ನು ಕ್ಷಣಕ್ಷಣಕ್ಕೆ ತಲುಪಿಸುವ ಒಂದು ಸುದ್ದಿ ಮಾಧ್ಯಮದ ಅಗತ್ಯ ಇರುವುದನ್ನು ಮನಗಂಡು newskarkala.com ಜನತೆಯ ನಾಡಿಮಿಡಿತ ಎಂಬ ಶೀರ್ಷಿಕೆಯೊಂದಿಗೆ ಒಂದು ನ್ಯೂಸ್ ವೆಬ್ ಮತ್ತು ಯೂಟ್ಯೂಬ್ ಚಾನೆಲ್ ಪ್ರಾಯೋಗಿಕ ನೆಲೆಯಲ್ಲಿ ಈಗಾಗಲೇ ಆರಂಭವಾಗಿದ್ದು, ಅದರ ಲೋಕಾರ್ಪಣ ಕಾರ್ಯಕ್ರಮವು ವಿಜಯದಶಮಿಯಂದು ನಡೆಯಲಿದೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕ್ಷಣ ಕ್ಷಣದ ಸುದ್ದಿಯೊಂದಿಗೆ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಕ್ಷಣಾರ್ಧದಲ್ಲಿ ತಿಳಿಸುವ newskarkala.com ವೆಬ್ ಹಾಗೂ ಯೂಟ್ಯೂಬ್ ಚಾನೆಲ್ ಅ. 25ರ ವಿಜಯದಶಮಿಯಂದು ಬೆಳಿಗ್ಗೆ 10:30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವೆಬ್ ತಾಣ ಅನಾವರಣಗೊಳಿಸಲಿದ್ದಾರೆ.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್,ಹೆಬ್ರಿ ಅನಂತ ಪದ್ಮನಾಭ ಕ್ಷೇತ್ರದ ಧರ್ಮದರ್ಶಿ ಎಚ್. ಭಾಸ್ಕರ ಜೋಯಿಸ್, ಉದ್ಯಮಿ ಡಿ. ಆರ್. ರಾಜು, ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ., ಎಂಪಿಎಂ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್, ಉದ್ಯಮಿ ನಿತ್ಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.ಈ ಕಾರ್ಯಕ್ರಮದಲ್ಲಿ newskarkala.com ಹಿಂದೆ ನಡೆಸಿದ್ದ ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಗುವುದು.

ತಮ್ಮೆಲ್ಲರನ್ನು ಈ ಕಾರ್ಯಕ್ರಮಕ್ಕೆ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇವೆ.


































