ಕೊರೊನಾ ವೈರಸ್ ಜನರಿಗೆ ಎಂದೂ ಮರೆಯದ ಪಾಠ ಕಲಿಸಿದೆ. ಜಗತ್ತಿನ ಆಥಿ೯ಕತೆ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಅನೇಕರು ಉದ್ಯೋಗ ಕಳೆದುಕೊಂಡು ಹಣಕಾಸಿನ ಅಭದ್ರತೆ ಎದುರಿಸುತ್ತಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಆತಂಕ ಹೆಚ್ಚಾಗಿರುವುದರಿಂದ ಹಣಕಾಸಿನ ನಿವ೯ಹಣೆಯ ವಿಷಯದಲ್ಲಿ ಸರಿಯಾದ ನಿಧಾ೯ರ ತೆಗೆದುಕೊಳ್ಳಲು ಇದು ಸರಿಯಾದ ಸಮಯವಾಗಿದೆ.
ನಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಚಿಂತನೆ ಮಾಡಿದಾಗ ನಾವು ಮಾಡುವ ತಪ್ಪುಗಳನ್ನು ಕಡಿಮೆ ಮಾಡಬೇಕು. ಅಲ್ಲದೆ ಸರಿಯಾದ ನಿಧಾ೯ರ ಮಾಡಬೇಕು.ಈ ರೀತಿಯ ಆಥಿ೯ಕ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಎದುರಿಸಲು ನಾವು ತಯಾರಾಗೋಣ. ಈ ನಿಟ್ಟಿನಲ್ಲಿ ಅಥಿ೯ಕ ತಜ್ಞರು ಕೆಲವು ನಿಯಮಗಳನ್ನು ನೀಡಿದ್ದಾರೆ.
ಉಳಿತಾಯ ಯೋಜನೆ ಪ್ರಾರಂಭಿಸಿರಿ

ನೀವು ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿರಬಹುದು. ಪರಿಣಾಮವಾಗಿ ಬಿಲ್ ಗಳನ್ನು ಕಟ್ಟಲು ಕಷ್ಟವಾಗುತ್ತದೆ. ನಮ್ಮ ಬಳಿ ಸಂಬಳದ ಕನಿಷ್ಠ 2-3 ತಿಂಗಳ ಉಳಿತಾಯವಾದರೂ ಇರಬೇಕು.ಹೊಟೇಲಲ್ಲಿ ಊಟ ಮಾಡುವ ಹವ್ಯಾಸವಿದ್ದರೆ ಅದನ್ನು ಕಡಿಮೆ ಮಾಡಿ. ಆದಷ್ಟು ಮನೆಯಲ್ಲಿ ಊಟ ತಿಂಡಿ ಮಾಡುವುದನ್ನು ರೂಢಿ ಮಾಡಬೇಕು. ಇದರಿಂದ ಕನಿಷ್ಠ 4-5 ಸಾವಿರ ರೂ ಉಳಿತಾಯವಾಗಲು ಸಾಧ್ಯ. ಸಂಬಳದ ಕನಿಷ್ಠ ಶೇ.20 ರಷ್ಟು ಹಣವನ್ನು ಉಳಿತಾಯ ಮಾಡಬೇಕು.ಉಳಿತಾಯ ಮಾಡಲು ಬಹಳ ದಾರಿಗಳಿವೆ ಉದಾ:
ಮ್ಯೂಚುವಲ್ ಫಂಡ್, ಎಫ್ ಡಿ ಸಕಾ೯ರಿ ಹೂಡಿಕೆಗಳು, ಎನ್.ಪಿ.ಎಸ್. ಇತ್ಯಾದಿ. ಆದರೆ ಹೆಚ್ಚು ಬಡ್ಡಿ ಸಿಗುವ ಆಸೆಯಿಂದ ಖಾಸಗಿ ಅಸುರಕ್ಷಿತ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಮೋಸ ಹೋಗದಿರಿ.
ಮೋಜುಮಸ್ತಿಯನ್ನು ಬಿಟ್ಟುಬಿಡಿ. ಮುಂದಿನ ಭವಿಷ್ಯದ ದೃಷ್ಟಿಯಿಂದ ನಾವು ಆಥಿ೯ಕ ಯೋಜನೆ ರೂಪಿಸಬೇಕಾಗಿದೆ.
ಅಗತ್ಯ ಖಚು೯ಗಳಿಗೆ ಹಣ ತೆಗೆದಿಡಿ
ಅನಗತ್ಯ ಖಚು೯ ಕಡಿಮೆ ಮಾಡಿ ಅಗತ್ಯ ಖಚು೯ಗಳ ಬಗ್ಗೆ ಗಮನ ಹರಿಸಬೇಕು ಉದಾ : ಮನೆ ಬಾಡಿಗೆ, ಬ್ಯಾಂಕಿನ ಇ.ಎಂ.ಐ,ವಿದ್ಯುತ್ ಬಿಲ್,ಮನೆಗೆ ಬೇಕಾದ ಅಗತ್ಯ ದಿನಸಿ ವಸ್ತುಗಳು ಇತ್ಯಾದಿ.
ಇತರ ಖಚು೯ಗಳನ್ನು ಮಾಡುವ ಸಂದಭ೯ ಅದು ಅಗತ್ಯವಿದೆಯೇ ಎಂಬುದರ ಬಗ್ಗೆ ಯೋಚಿಸಿ ಖಚು೯ಮಾಡಿ .ಮನೆಯಲ್ಲಿ ಆದಷ್ಟು ಸರಳ ಜೀವನಕ್ಕೆ ಆದ್ಯತೆ ಕೊಡಿ . ಅಲಂಕಾರಿಕ ವಸ್ತುಗಳ ಬಗ್ಗೆ ಈಗ ಯೋಚಿಸದಿರುವುದು ಉತ್ತಮ.ನಮ್ಮ ಹಿಂದಿನ ತಲೆಮಾರಿನವರು ಯಾವ ರೀತಿ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ತಿಳಿದು ಅದರಂತೆ ಜೀವನ ಮಾಡಿದರೆ ಉತ್ತಮ.
ಇರುವ ಕೆಲಸವನ್ನೇ ಚೆನ್ನಾಗಿ ಮಾಡಿ

ಈ ಸಮಯದಲ್ಲಿ ನೀವು ನೌಕರಿ ಬಿಡುವ ಅಥವಾ ಹೊಸ ನೌಕರಿ ಹುಡುಕುವ ಯೋಚನೆ ಬೇಡ. ಇರುವ ಕೆಲಸದಲ್ಲಿ ಉತ್ತಮ ಸಾಧನೆ ಮಾಡಿ. ಈಗ ಹೆಚ್ಚಿನ ಎಲ್ಲಾ ಉದ್ಯಮ ಚೇತರಿಸಿಕೊಳ್ಳುವ ಸಮಯ ಈ ವೇಳೆಯಲ್ಲಿ ನಿಮ್ಮ ಸಾಧನೆ ಅಗತ್ಯವಿದೆ.
ಆರೋಗ್ಯದ ಬಗ್ಗೆ ಗಮನವಿರಲಿ
ಈ ಕೊರೊನಾ ಸಮಯದಲ್ಲಿ ನಾವೆಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅಲ್ಲದೆ ಮನೆ ಮಂದಿಯ ಆರೋಗ್ಯದ ರಕ್ಷಣೆ ಕೂಡ ಮುಖ್ಯ. ಈ ನಿಟ್ಟಿನಲ್ಲಿ ಮುಂಬರುವ ಅನಾರೋಗ್ಯ ಸಂದಭ೯ ಆಸ್ಪತ್ರೆ ಖಚು೯ ನಮಗೆ ಹೊರೆಯಾಗಬಹುದು. ಆರೋಗ್ಯ ವಿಮೆ ಸೇರಿದಂತೆ ಜನರಲ್ ವಿಮೆ ನಮ್ಮಲ್ಲಿದ್ದರೆ (ಪುಲ್ ಕವರೇಜ್ ) ಉತ್ತಮ.ಕುಟುಂಬ ವೈದ್ಯರ ಮಾಗ೯ದಶ೯ನ ನಿರಂತರವಾಗಿ ಪಡೆಯುತ್ತಿದ್ದರೆ ಉತ್ತಮ. ಒಟ್ಟಾಗಿ ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ.
ಹೆಚ್ಚು ಸಂಪಾದಿಸಿ
ಮನೆಯಲ್ಲಿರುವಾಗ ಸುಮ್ಮನೆ ಸಮಯ ಹಾಳು ಮಾಡದೆ ತರಕಾರಿ ಬೇಸಾಯ, ಪುಷ್ಪ ಕೃಷಿ, ತಿಂಡಿ ತಿನಸು ತಯಾರಿಕೆ ಮುಂತಾದ ಸಣ್ಣಪುಟ್ಟ ಕೆಲಸ ಮಾಡಿ ಹೆಚ್ಚುವರಿ ಹಣ ಸಂಪಾದಿಸಬಹುದು. ಆದಷ್ಟು ಮನೆಯಲ್ಲಿ ಕುಳಿತು ಸಂಪಾದನೆ ಮಾಡುವ ಉಪ ಉದ್ಯೋಗವಿದ್ದರೆ ಉತ್ತಮ .ಪಿಗ್ಮಿ ಕಟ್ಟುವ ಹವ್ಯಾಸ ಬೆಳೆಸಿ. ಇದರಿಂದ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ.
ಯೋಚನಾ ದಾಟಿ ಬದಲಾಗಲಿ
ನಾವು ಮುಂದೆ ಉತ್ತಮ ಜೀವನ ಸಾಗಿಸಲು ನಮ್ಮ ಬಳಿ ಎಷ್ಟು ಹಣವಿರಬೇಕು ಎಂಬುದನ್ನು ಗಮನದಲ್ಲಿರಿಸಿ ಯೋಜನೆ ರೂಪಿಸಿ ಅದರಂತೆ ನಡೆಯಬೇಕಾಗಿದೆ. ನಿವೃತ್ತಿ ಸಮಯದಲ್ಲಿ ಉತ್ತಮ ಜೀವನ ಸಾಗಿಸಲು ನಿವೃತ್ತಿ ಆಥಿ೯ಕ ಯೋಜನೆ ರೂಪಿಸಿಕೊಳ್ಳಬೇಕು.
ನಮ್ಮ ಜೀವನ ಇತರರಿಗೆ ಮಾದರಿಯಾಗಬೇಕಾದರೆ ಮಾನವೀಯ ಸಂಬಂಧದಿ೦ದ ಕೂಡಿದ ಬದುಕು ನಮ್ಮದಾಗಬೇಕು. ಇದರಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗುತ್ತದೆಯದಲ್ಲದೆ ಶಿಸ್ತಿನ ಜೀವನ ಇತರರಿಗೆ ಮಾದರಿಯಾಗಬಹುದು.
ಒಟ್ಟಾಗಿ ಕೊರೊನಾ ಸಂಕಷ್ಟ ನಮಗೆ ಪಾಠವಾಗಿದೆ. ಈ ಪಾಠದಿಂದ ನಾವೆಲ್ಲರೂ ಹೊಸ ಬದುಕು ರೂಪಿಸೋಣ.
ರಾಘವೇಂದ್ರ ಪ್ರಭು,ಕವಾ೯ಲು








































































