ಈಗಾಗಲೇ ವೀರಪ್ಪನ್ ಕುರಿತು ಸಾಕಷ್ಟು ಸಿನಿಮಾಗಳು ಬಂದೋಗಿದೆ. ಕಿಶೋರ್ ವೀರಪ್ಪನ್ ಪಾತ್ರದಲ್ಲಿ ನಟಿಸಿದ್ದ ಅಟ್ಟಹಾಸ ಸಿನಿಮಾ 7 ವರ್ಷಗಳ ಹಿಂದೆ ಬಂದಿತ್ತು. ಇದೀಗ ಇದೇ ಕಥೆಯನ್ನ ಮತ್ತಷ್ಟು ವಿಸ್ತರಿಸಿ, 10 ಗಂಟೆಗಳ ವೆಬ್ ಸೀರಿಸ್ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.
ದಂತಚೋರ ವೀರಪ್ಪನ್ ಆರ್ಭಟದ ಕುರಿತ ನಿರ್ಮಾಣವಾಗಿದ್ದ ಅಟ್ಟಹಾಸ ಸಿನೆಮಾ 2013ರಲ್ಲಿ ಬಿಡುಗಡೆಯಾಗಿ ಸಿನಿ ರಸಿಕರ ಮನಗೆದ್ದಿತ್ತು. ಎ.ಎಂ.ಆರ್ ರಮೇಶ್ ಮತ್ತು ಕಿಶೋರ್ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತ್ತು. ಇದೀಗ ಮತ್ತೆ ವೀರಪ್ಪನ್ ಕಥೆಯನ್ನು ಕಿರುಪರದೆಯಲ್ಲಿ ಹೇಳಲು ತಯಾರಿ ನಡೀತಿದೆ.
ಎರಡೂವರೆ ಗಂಟೆಗಳ ಅಟ್ಟಹಾಸ ಸಿನಿಮಾದಲ್ಲಿ ವೀರಪ್ಪನ್ ಆರ್ಭಟದ ಅಷ್ಟೂ ಕಥೆಯನ್ನ ಹೇಳೋದಕ್ಕೆ ಆಗಿರಲಿಲ್ಲ. ಈಗ ವೆಬ್ ಸೀರಿಸ್ ಟ್ರೆಂಡ್ ನಡೀತಿದ್ದು, ಈಗ ಆ ಕಥೆಯನ್ನ ಸಂಪೂರ್ಣವಾಗಿ ಕಟ್ಟಿಕೊಡ್ತೀನಿ ಅಂತಿದ್ದಾರೆ ನಿರ್ದೇಶಕರು.
ಈಗಾಗಲೇ ಅಟ್ಟಹಾಸ ಚಿತ್ರಕ್ಕಾಗಿ ಶೂಟ್ ಮಾಡಿದ್ದ ಒಂದಷ್ಟು ದೃಶ್ಯಗಳನ್ನ ವೆಬ್ ಸರಣಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳು ವೆಬ್ ಸರಣಿಯ ಶೂಟಿಂಗ್ ಶುರುವಾಗಲಿದೆ. ಕಿಶೋರ್ ಜೊತೆಗೆ ಬಾಲಿವುಡ್ ಕಲಾವಿದರು ಅಟ್ಟಹಾಸ ವೆಬ್ ಸೀರಿಸ್ನಲ್ಲಿ ಬಣ್ಣ ಹಚ್ಚಲಿದ್ದಾರೆ. ಆಸ್ಫೋಟ ಅನ್ನೋ ಸಿನಿಮಾ ಕೈಗೆತ್ತಿಕೊಂಡಿದ್ದ ಎ.ಎಂ.ಆರ್ ರಮೇಶ್ ಅದನ್ನ ಪಕ್ಕಕ್ಕಿಟ್ಟು ವೀರಪ್ಪನ್ ಹಿಂದೆ ಬಿದ್ದಿದ್ದಾರೆ.
ವೆಬ್ ಸೀರಿಸ್ನಲ್ಲಿ ವೀರಪ್ಪನ್ ಬಾಲ್ಯದಿಂದ ಹಿಡಿದು, ಸಾಯುವವರೆಗಿನ ಸಂಪೂರ್ಣ ಚಿತ್ರಣವನ್ನ ಕಟ್ಟಿಕೊಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ವೆಬ್ ಸೀರಿಸ್ ಹವಾ ಜೋರಾಗಿದ್ದು, ವೀರಪ್ಪನ್ ಅಟ್ಟಹಾಸದ ಮೂಲಕ ಕನ್ನಡದಲ್ಲೂ ವೆಬ್ ಸೀರಿಸ್ ಜಮಾನ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿದೆ.