ವ್ಯಕ್ತಿಯ ಸಾಧನೆ ಹಿಂದೆ ಗುರುವಿನ ಪಾತ್ರ ಮಹತ್ತರ – ಶ್ಯಾಮಲಾ
ಕಾರ್ಕಳ : ವಿದ್ಯಾರ್ಥಿಗಳ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಜವಾಬ್ದಾರಿಯ ಬಗ್ಗೆ ಕಲಿಸಿ ಅವರ ಭವಿಷ್ಯ ಹಸನಾಗಿಸುವ ಶಿಲ್ಪಿಗಳೇ ಶಿಕ್ಷಕರು. ಅಂಕಗಳ ಜೊತೆಗೆ ಜೀವನ ಮೌಲ್ಯಗಳ ತುಂಬುವವರು ಶಿಕ್ಷಕರು. ಪ್ರತಿಯೊಬ್ಬ ವ್ಯಕ್ತಿಯ ಸಾಧನೆ ಹಿಂದೆ ಗುರುವಿನ ಪಾತ್ರ ಮಹತ್ತರ ಎಂದು ಎಸ್.ವಿ.ಟಿ. ಮಹಿಳಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ಯಾಮಲ ಕುಮಾರಿ ಬೇವಿಂಜೆ ಅಭಿಪ್ರಾಯಪಟ್ಟರು.
ಅವರು ಆ. 5ರಂದು ಕಾರ್ಕಳ ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆ ಗಣಿತನಗರದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶುಭ ದಿನ
ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯ ಅನಂತರದ ಸ್ಥಾನ ಗುರುವಿಗಿದೆ. ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ ಶಿಕ್ಷಕರಿಗೆ ಪೂಜನೀಯ ಸ್ಥಾನ ನೀಡಲಾಗುತ್ತದೆ. ಶಿಕ್ಷಕರ ದಿನಾಚರಣೆ ಶಿಕ್ಷಣ ನೀಡಿದವರಿಗೆ ಅರ್ಪಿಸುವ ಶುಭ ದಿನ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹೇಳಿದರು.

ಸನ್ಮಾನ
ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸುಲೋಚನಾ, ಹೊಸ್ಮಾರು ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪ್ರಭಾಚಂದ್ರ, ಬೈಂದೂರು ತಾಲೂಕು ನಿವೃತ್ತ ದೈಹಿಕ ಪರಿವೀಕ್ಷಣಾಧಿಕಾರಿ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ವಾಣಿ ಕೆ., ಸಾರ್ವಜನಿಕ ಸಂಪರ್ಕಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ ಡಾ. ಮಿಥುನ್ ಯು. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ಅದಿತಿ ಪ್ರಾರ್ಥಿಸಿದರು. ಶೈಕ್ಷಣಿಕ ಸಲಹೆಗಾರೆ ಕೀರ್ತಿ ಸ್ವಾಗತಿಸಿ, ಶಿಕ್ಷಕಿ ವಿಜೇತರಾಣಿ ಕಾರ್ಯಕ್ರಮ ನಿರೂಪಿಸಿದರು. ವೈಶಾಲಿ ವಂದಿಸಿದರು.






































































