ನೈತಿಕ ಶಿಕ್ಷಣದಿಂದ ಸುಂದರ ಸಮಾಜ ನಿರ್ಮಾಣ – ಪೂರ್ಣಿಮಾ ಪೈ
ಕಾರ್ಕಳ : ನೈತಿಕ ಶಿಕ್ಷಣದ ಕೊರತೆಯಿಂದಾಗಿ ಪ್ರಸ್ತುತ ಸಮಾಜದಲ್ಲಿ ಯುವಪೀಳಿಗೆ ಹಾದಿ ತಪ್ಪುತ್ತಿರುವುದು ವಿಷಾದನೀಯ. ಜೀವನ ಮೌಲ್ಯಾಧಾರಿತ ನೈತಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಪುರಾಣ ಇತಿಹಾಸಗಳನ್ನೊಳಗೊಂಡ ನೈತಿಕ ಶಿಕ್ಷಣ ನೀಡುವ ಕೆಲಸ ನಿರಂತರವಾಗಿ ಸಾಗಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ನಿವೃತ್ತ ಶಿಕ್ಷಕಿ ಪೂರ್ಣಿಮಾ ಪೈ ಅಭಿಪ್ರಾಯಪಟ್ಟರು.
ಅವರು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ಭುವನ ಸಂಸ್ಕಾರ ಎಂಬ ಭಗವದ್ಗೀತಾ ಪಠಣ ಹಾಗೂ ನೀತಿಕತೆಗಳನ್ನೊಳಗೊಂಡ ನೈತಿಕ ಹಾಗೂ ಮೌಲ್ಯ ಶಿಕ್ಷಣ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲೇ ಪ್ರಮೀಳಾ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾನ್ವಿ ಜಿ. ಎಸ್. ಭಗವದ್ಗೀತೆಯಲ್ಲಿನ ಭಕ್ತಿಯೋಗದ ಶ್ಲೋಕ ಪಠಿಸಿದರು. ಶಿಕ್ಷಕಿ ಜ್ಯೋತಿ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹರಿಶ್ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

































