ಕಾರ್ಕಳ : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಮೇ 22ರಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರಸರಸ್ವತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವ, 15ನೇ ವರ್ಷದ ವರ್ಧಂತ್ಯುತ್ಸವ, ಸಾಮೂಹಿಕ ಚಂಡಿಕಾ ಯಾಗ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 6 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, 7.30ರಿಂದ ಗಂಟೆಯಿಂದ ಸಾಮೂಹಿಕ ಚಂಡಿಕಾಯಾಗ, 8 ಗಂಟೆಗೆ ಪಡುಕುತ್ಯಾರು ಶ್ರೀ ಮಹಾಸಂಸ್ಥಾನಕ್ಕೆ ಜಗದ್ಗುರುಗಳ ಆಗಮನ, 9.30ರಿಂದ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾ ಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, 10 ಗಂಟೆಗೆ ಆನೆಗುಂದಿ ಪ್ರತಿಷ್ಠಾನ ವತಿಯಿಂದ ಜಗದ್ಗುರುಗಳ ಪಾದಪೂಜೆ, 10.30ರಿಂದ ವಿದ್ವಾನ್ ರಾಜಶೇಖರ ಎಲ್. ಭೀಮಾಚಾರ್ ಬೆಂಗಳೂರು ಬಳಗದವರಿಂದ ಮೋರ್ಸಿಂಗ್ ತರಂಗ ಲಯ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ.
ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಚಾಳುಕ್ಯ ಶಿಲ್ಪಿ ಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಸಂಶೋಧಕ, ಲೇಖಕ ಹಾಗೂ ವಿದ್ವಾಂಸ ಡಾ.ಜಿ. ಜ್ಞಾನಾನಂದ ಬೆಂಗಳೂರು, ಮಹಾ ಶಿಲ್ಪಿ ಶ್ರೀ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಸ್ಥಪತಿ, ಪಾರಂಪರಿಕ ಶಿಲ್ಪಿ ಶಿಲ್ಪಾಚಾರ್ಯ ಕೆ.ಪಿ. ಉಮಾಪತಿ ಆಚಾರ್ಯ ಕುಂಭಕೋಣಂ ಅವರಿಗೆ, ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿಯನ್ನು ಶಿಲ್ಪಿ ಜಯಣ್ಣ ಆಚಾರ್ಯ ಚಿಕ್ಕಮಗಳೂರು ಅವರಿಗೆ ಹಾಗೂ ವಾಸ್ತು ಪಿತಾಮಹನ್ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಾರಂಪರಿಕ ದೇವಾಲಯ ವಾಸ್ತುಶಿಲ್ಪಿ ಸ್ಥಪತಿ ಡಾ. ಕೆ. ದಕ್ಷಿಣಾಮೂರ್ತಿ ಚೆನ್ನೈ ಅವರಿಗೆ ಪ್ರದಾನ ಮಾಡಲಾಗುವುದು.

ಆನೆಗುಂದಿಶ್ರೀ ಪ್ರಶಸ್ತಿ
ಮಹಾಸಂಸ್ಥಾನದ ವತಿಯಿಂದ ಶಿಲ್ಪ, ಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಸಮಾಜದ ಬಂಧುಗಳಿಗೆ ನೀಡಲಾಗುವ ಆನೆಗುಂದಿಶ್ರೀ ಪ್ರಶಸ್ತಿಯನ್ನು ವಿಜಯಪುರ ವಿಶ್ವಕರ್ಮನಗರ ಸಂಸ್ಥಾಪಕ, ಉದ್ಯಮಿ ಸಚಿನ್ ಗಿರ್ಗಾವಕರ್, ಸಮಾಜ ಸೇವಕ ಸುಬ್ರಾಯ ಆಚಾರ್ಯ ಇನ್ನಂಜೆ, ವಾಸ್ತುಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ ಹಾಗೂ ಅಂತರಾಷ್ಟ್ರೀಯ ಮೋರ್ಸಿಂಗ್ ವಾದಕ ವಿದ್ವಾನ್ ರಾಜಶೇಖರ ಎಲ್. ಭೀಮಾಚಾರ್ ಬೆಂಗಳೂರು ಇವರಿಗೆ ನೀಡಿ ಗೌರವಿಸಲಾಗುವುದು.
ಮಹಾಶಿಲ್ಪಿ ಲೋಕಾರ್ಪಣೆ
ಪಂಚಶಿಲ್ಪಗಳಲ್ಲಿ ಆಧುನಿಕತೆ ವಿನೂತನ ತಾಂತ್ರಿಕತೆ ನವನವೀನ ಆವಿಷ್ಕಾರ ಕುರಿತ ಮಹಾಸಂಸ್ಥಾನದ ಕಿರು ಸಾಕ್ಷ್ಯ ಚಿತ್ರ ʼಮಹಾಶಿಲ್ಪಿʼ ಲೋಕಾರ್ಪಣೆ ನಡೆಯಲಿದ್ದು, ಈ ಚಿತ್ರವನ್ನು ಬನ್ನಡ್ಕ ಮೂಡಬಿದ್ರೆ ಎಸ್.ಕೆ.ಎಫ್. ಸಮೂಹ ಸಂಸ್ಥೆಗಳು ನಿರ್ಮಾಣ ಮಾಡಿದೆ.
ಸಮಾರಂಭದಲ್ಲಿ ಶಾಸಕರು, ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರು, ಪ್ರತಿಷ್ಠಾನದ ದೇವಸ್ಥಾನದ ಧರ್ಮದರ್ಶಿಗಳು, ಮುಂಬೈ, ಬೆಂಗಳೂರು, ಕೊಯಂಬುತ್ತೂರು ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.












