ಡಿ.20 : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ವಿದೇಶಿ ಕನ್ನಡಿಗರು, ಕಿಟೆಲ್‌ ವಂಶಸ್ಥರು ಸೇರಿದಂತೆ 18 ದೇಶಗಳ ಜನರು ಭಾಗಿ – ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಹೊಸ ಪರಂಪರೆ ಸೃಷ್ಟಿ

ಮಂಡ್ಯ : ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ 18 ದೇಶಗಳ ಸುಮಾರು 250ಕ್ಕೂ ಹೆಚ್ಚು ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದು, ದೇಸಿ ನೆಲದಲ್ಲಿ ವಿದೇಶಿ ಕಲರವ ಮೂಡಿ ಬರಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿರುವ ಕನ್ನಡಿಗರ ಮಾತೃಸಂಸ್ಥೆ ಎನ್ನುವ ಭಾವ ಮೂಡಿಸಿರುವುದರಿಂದ ಅಮೆರಿಕ, ಯುರೋಪ್‌, ಗಲ್ಫ್‌, ಏಷಿಯಾ ಫೆಸಿಫಿಕ್‌ ರಾಷ್ಟ್ರಗಳು, ಆಸ್ಪ್ರೇಲಿಯಾ ಸೇರಿದಂತೆ ನಾನಾ ದೇಶಗಳ ವಿದೇಶಿ ಕನ್ನಡಿಗರು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ. ಆ ಮೂಲಕ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಹೊಸ ಪರಂಪರೆ ಸೃಷ್ಟಿಸಲು ಸಕ್ಕರೆ ನಾಡು ಸಜ್ಜಾಗಿದೆ.
ಸಾಹಿತಿ ಪುತಿನ ಅವರ ಪುತ್ರಿ ಅಲಮೇಲು, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಕರ್ಪೂರ ಶ್ರೀನಿವಾಸ ರಾವ್‌ ಅವರ ಮೊಮ್ಮಗಳಾದ ನಿರ್ಮಲಾ ಕರ್ಪೂರ, ಕನ್ನಡದ ಮೊಟ್ಟ ಮೊದಲ ಶಬ್ದಕೋಶದ ಕರ್ತೃ ಫರ್ಡಿನೆಂಡ್‌ ಕಿಟಲ್‌ ಅವರ ವಂಶಸ್ಥರು ಸೇರುವುದು ಮತ್ತೊಂದು ವಿಶೇಷ.

21 ವಿದೇಶಿ ಕನ್ನಡಿಗರಿಗೆ ಸನ್ಮಾನ
ಸಮ್ಮೇಳನದಲ್ಲಿ 21 ವಿದೇಶಿ ಕನ್ನಡಿಗರನ್ನು ಸನ್ಮಾನಿಸಲಾಗುತ್ತಿದ್ದು, ಕನ್ನಡದ ಸೇವೆಯಲ್ಲಿ ಬೆಳ್ಳಿ ಹಬ್ಬ ಆಚರಿಸಿರುವ ಮೂರು ಅಮೆರಿಕದ ಕನ್ನಡ ಸಂಘಗಳೂ ಸೇರಿವೆ. ಮೊದಲ ಬಾರಿಗೆ ವಿದೇಶದಲ್ಲಿ ಕನ್ನಡ ಭವನ ಕಟ್ಟಿರುವ ಬೆಹರಿನ್‌ ಕನ್ನಡ ಸಂಘ, ಇತ್ತೀಚೆಗೆ ಸ್ವಂತ ಕನ್ನಡ ಭವನ ಕಟ್ಟಿರುವ ಆಸ್ಪ್ರೇಲಿಯಾದ ಮೆಲ್ಬೋರ್ನ್‌ ಕನ್ನಡ ಸಂಘಗಳೂ ಸೇರಿವೆ. 60 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕಾಗೋ ವಿಶ್ವವಿದ್ಯಾಲಯದ ಕನ್ನಡ ಪೀಠವನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತಿದೆ.

ಮಂಡ್ಯದವರಾದ ಸಾಹಿತಿ ತ್ರಿವೇಣಿ ಅವರ ಪ್ರಖ್ಯಾತ ಕಾದಂಬರಿ ಶರಪಂಜರವನ್ನು ಇಟಲಿ ನಿವಾಸಿ ಕನ್ನಡತಿ ಜಯಾ ಮೂರ್ತಿ ಇಟಾಲಿಯನ್‌ ಭಾಷೆಗೆ ಅನುವಾದಿಸಿರುವ ಕಾದಂಬರಿಯನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಬಿಡುಗಡೆಯಾಗಲಿದೆ. ತ್ರಿವೇಣಿಯವರ ಪುತ್ರಿ ಮೀರಾ ಶಂಕರ್‌ ಹಾಜರಿರುತ್ತಾರೆ. ಇದರ ಜೊತೆಗೆ ಪ್ರಥಮ ಬಾರಿಗೆ ಯುರೋಪ್‌ ರಾಷ್ಟ್ರಗಳ ಉತ್ಸಾಹಿ ಬರಹಗಾರರ ಸಪ್ತಸಾಗರದಾಚೆ ಎಲ್ಲೋ ಕೃತಿ ಸಮ್ಮೇಳನದ ಕೃತಿಗಳ ಮಾಲಿಕೆಯಲ್ಲಿ ಪ್ರಕಟವಾಗುತ್ತಿದೆ.

ಅನಿವಾಸಿ ಭಾರತೀಯರಿಗೆ ಗೋಷ್ಠಿ ಅಧ್ಯಕ್ಷತೆ ಗೌರವ
ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಡಿ.22ರಂದು ಬೆಳಗ್ಗೆ 9.30ಕ್ಕೆ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಎನ್ನುವ ಅನಿವಾಸಿ ಭಾರತೀಯರ ಕುರಿತ ವಿಶೇಷ ಗೋಷ್ಠಿ ನಡೆಯಲಿದ್ದು, ಅಮೆರಿಕದ ಅಮರನಾಥ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಇವರೊಂದಿಗೆ ಬಹರೇನ್‌ನ ಕಿರಣ್‌ ಉಪಾಧ್ಯಾಯ ಆಶಯ ಭಾಷಣ ಮಾಡಲಿದ್ದು, ಕತಾರ್‌ನ ಎಚ್‌.ಕೆ. ಮಧು, ಇಂಗ್ಲೆಂಡ್‌ನ ಅಶ್ವಿನ್‌ ಶೇಷಾದ್ರಿ, ಯುಎಇಯ ಶಶಿಧರ ನಾಗರಾಜಪ್ಪ, ಜರ್ಮನಿಯ ರಶ್ಮಿ ನಾಗರಾಜ್‌ ತಮ್ಮ ಪ್ರಬಂಧಗಳನ್ನು ಮಂಡಿಸುವ ಮೂಲಕ ಕನ್ನಡ ಕಂಪು ಸೂಸಲಿದ್ದಾರೆ. ವಿದೇಶಿಗರ ಕುರಿತು ಅಕೃತ ದಾಖಲೆ ತಯಾರಿಸಿರುವ ಡಾ. ಶ್ರೀನಿವಾಸ ಹಾವನೂರ ಅವರ ಮಗಳು ನಿವೇದಿತಾ ಹಾವನೂರ ಹೊನ್ನತ್ತಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕನ್ನಡ ಸಂಘಗಳ ಮಾಹಿತಿ ಕೋಶ
ಅಮೆರಿಕದ ಬೆಂಕಿ ಬಸಣ್ಣನವರು ವಿದೇಶದಲ್ಲಿನ ಕನ್ನಡ ಸಂಘಗಳ ಕುರಿತ ಮಾಹಿತಿ ಕೋಶ ಸಿದ್ಧಪಡಿಸಿದ್ದು, ಇದರಲ್ಲಿ ಪ್ರಸ್ತುತ 75ಕ್ಕೂ ಹೆಚ್ಚು ವಿದೇಶದಲ್ಲಿನ ಕನ್ನಡ ಸಂಘಗಳ ಕುರಿತ ಮಾಹಿತಿಗಳಿವೆ. ಇಂತಹ ಪ್ರಯತ್ನ ನಡೆದಿರುವುದು ಇದೇ ಮೊದಲಾಗಿದೆ, ಮುಂಬರುವ ದಿನಗಳಲ್ಲಿ ಈ ಬೆಸುಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಾಲವನ್ನು ಮಹತ್ತರವಾಗಿ ವಿಸ್ತರಿಸುವುದಲ್ಲದೇ, ಜಾಗತಿಕ ಕನ್ನಡಿಗರೆಲ್ಲರ ಮಾತೃ ಸಂಸ್ಥೆಯಾಗಲು ಕಾರಣವಾಗಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.









































































































error: Content is protected !!
Scroll to Top