ಸುಳ್ಯ : ಸುಳ್ಯ ಜಯನಗರದ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಕ್ ನೀಡಿರುವ ಘಟನೆ ನಡೆದಿದೆ.
ಈ ಬಗ್ಗೆ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಾರೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಾಶಿದ್ ತಲಾಕ್ ನೀಡಿದ ಪತಿ. ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದರು.
ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ರಾಶಿದ್ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯದ ಪತ್ನಿ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದರು.
ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಮನಸ್ತಾಪ ಉಂಟಾಗಿತ್ತು. ಸಂಬಂಧಿಕರು, ಹಿರಿಯರು ಇದರ ಬಗ್ಗೆ ಮಾತನಾಡಿ ಸರಿಪಡಿಸಲು ಪ್ರಯತ್ನಿಸಿದ್ದರು. ಆದರೆ ಇದು ಯಾವುದನ್ನು ಕೇಳದೆ ಏಕಾಏಕಿ ರಾಶಿದ್ ಪತ್ನಿಯ ಮೊಬೈಲ್ಗೆ ಮೂರು ತಲಾಕ್ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಮಹಿಳೆ ಸುಳ್ಯ ಪೊಲೀಸರಿಗೆ ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸಪ್ ಮೂಲಕ ತಲಾಕ್ : ಪತಿ ವಿರುದ್ಧ ದೂರು ದಾಖಲು
