ಪ್ರತಿ ಕೈಗೆ ಸಿಕ್ಕ ನಂತರ ಉತ್ತರಿಸುತ್ತೇನೆ ಎಂದ ಬಿ.ಕೆ. ಹರಿಪ್ರಸಾದ್
ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರಿಗೆ ಎಐಸಿಸಿ ಶೋಕಾಸ್ ನೋಟಿಸ್ ನೀಡಿದೆ, ಪ್ರತಿ ಕೈಗೆ ಸಿಕ್ಕಿದ ನಂತರ ನಾನು ಉತ್ತರಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಐಸಿಸಿಯಿಂದ ಶೋಕಾಸ್ ನೋಟಿಸ್ ನೀಡಿರುವ ವಿಚಾರವನ್ನು ವಾಟ್ಸಾಪ್ನಲ್ಲಿ ನೋಡಿದ್ದೇನೆ. ನಾನು ಇಂದು ಪ್ರತಿಯನ್ನು ಪಡೆಯಬಹುದು. ನೋಟೀಸ್ ನನ್ನ ಮತ್ತು ಪಕ್ಷದ ನಡುವೆ ಇದೆ. ನನ್ನ ಕೈಗೆ ನೋಟಿಸ್ ಬಂದಾಗ ಉತ್ತರಿಸುತ್ತೇನೆ. ಅವರು ಉತ್ತರಿಸಲು 10 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ನನಗೆ ಗೊತ್ತಾಯಿತು, ಎಐಸಿಸಿಗೆ ವಿವರಿಸುತ್ತೇನೆ ಎಂದರು.
ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ಅರಸು ಆಗುವುದಿಲ್ಲ ಎಂದು ತಿವಿದಿದ್ದರು. ಅಷ್ಟೇ ಅಲ್ಲ ಎಲ್. ಕೆ. ಅಡ್ವಾಣಿಯನ್ನು ಸಿದ್ದರಾಮಯ್ಯ ಭೇಟಿಯಾಗಿದ್ದರು ಅಂತಲೂ ಪರೋಕ್ಷವಾಗಿ ಹೇಳಿದ್ದರು. ಇನ್ನು ಬಿ. ಕೆ. ಹರಿಪ್ರಸಾದ್ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಆಪ್ತ ಬಣ ತಿರುಗೇಟು ನೀಡಿತ್ತು. ಸಚಿವ ಎಂ. ಬಿ. ಪಾಟೀಲ್, ಇಂತಹ ಹೇಳಿಕೆ ಶೋಭೆ ತರುವುದಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದು ಟಾಂಗ್ ಕೊಟ್ಟಿದ್ದರು.
ಹರಿಪ್ರಸಾದ್, ಸಿದ್ದರಾಮಯ್ಯ ಅವರ ಹೆಸರು ಹೇಳದೆ ಭಾಷಣದುದ್ದಕ್ಕೂ ಅವರನ್ನು ಟಾರ್ಗೆಟ್ ಮಾಡಿ, ದಲಿತ ನಾಯಕ ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಲು ಅರ್ಹರು. ಮುಖ್ಯಮಂತ್ರಿ, ಅವರನ್ನು ಡಿಸಿಎಂ ಸ್ಥಾನದಿಂದ ಕೆಳಗಿಳಿಸಿ ಸಚಿವ ಸ್ಥಾನಕ್ಕೆ ಇಳಿಸಲಾಗಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ದಲಿತರೊಬ್ಬರನ್ನು ಆಯ್ಕೆ ಮಾಡಬೇಕಿತ್ತು. ಸತೀಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದರು.