ನಾಟಕಗಳಿಗೆ ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ಭರವಸೆ

ಕಾರ್ಕಳ, ನ.7: ಕರಾವಳಿಯ ನಾಟಕ ಕಲಾವಿದರ ಮೊರೆಗೆ ಆಡಳಿತ ಕೊನೆಗೂ ಸ್ಪಂದಿಸಿದೆ. ಸರಕಾರ ನಿಗದಿ ಮಾಡಿರುವ ಕೊರೊನಾ ಸುರಕ್ಷಾ ಕ್ರಮಗಳನ್ನು ಅನುಸರಿಸಿ ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಅನುಮತಿ ನೀಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಭರವಸೆ ನೀಡಿದ್ದಾರೆ.
ಕೊರೊನಾ ಹಾವಳಿಯಿಂದಾಗಿ ಕಳೆದ ಸುಮಾರು ಎಂಟು ತಿಂಗಳಿಂದ ನಾಟಕ ಪ್ರದರ್ಶನ ಸಂಪೂರ್ಣ ಸ್ಥಗಿತಗೊಂಡು ನಾಟಕವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಅನೇಕ ಕಲಾವಿದರು, ನಿರ್ದೇಶಕರು, ಹಾಗೂ ನೇಪಥ್ಯ ಕಲಾವಿದರು ಅತಂತ್ರರಾಗಿದ್ದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 50ಕ್ಕೂ ಅಧಿಕ ವೃತ್ತಿಪರ ನಾಟಕ ತಂಡಗಳಿವೆ. ಈ ಪೈಕಿ ಹೆಚ್ಚಿನ ತಂಡಗಳು ತುಳು ಹಾಸ್ಯ ನಾಟಕಗಳನ್ನು ಪ್ರದರ್ಶಿಸಿ ಜನಪ್ರಿಯವಾಗಿವೆ. ನಾಟಕಗಳು ನೂರಾರು ಮಂದಿಗೆ ಜೀವನೋಪಾಯವನ್ನು ಕಲ್ಪಿಸಿವೆ. ಕಲೆಯನ್ನೇ ನಂಬಿಕೊಂಡು ಬದುಕುತ್ತಿರುವ ಅನೇಕ ಕಲಾವಿದರಿದ್ದಾರೆ.
ಇತ್ತೀಚೆಗೆ ದಕ್ಷಿಣ ಕನ್ನಡ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೂಜಾರಿ ಅವರು ಯಕ್ಷಗಾನಕ್ಕೆ ಶರತ್ತುಬದ್ಧ ಅನುಮತಿ ನೀಡುವಿದಾಗಿ ಹೇಳಿದ್ದರು. ಆದರೆ ಈ ಸಂದರ್ಭದಲ್ಲಿ ನಾಟಕಗಳ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಇದು ನಾಟಕ ಕಲಾವಿದರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಾಟಕ ಕಲಾವಿದರ ಸಂಘ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ನಿನ್ನೆ ಬೇಟಿ ಮಾಡಿ ಮನವಿ ಸಲ್ಲಿಸಿತು.
ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ನಾಟಕವೂ ಸೇರಿದಂತೆ ಎಲ್ಲ ಪ್ರಕಾರದ ಮನರಂಜನಾ ಕಾರ್ಯಕ್ರಮಗಳಿಗೆ ಸರಕಾರದ ಮಾರ್ಗಸೂಚಿಯಂತೆ ಷರತ್ತುಬದ್ಧ ಅನುಮತಿ ನೀಡುವ ಭರವಸೆ ನೀಡಿದ್ದಾರೆ. ಇದರಿಂದ ಆತಂಕದಲ್ಲಿದ್ದ ಕಲಾವಿದರು ನಿರಾಳರಾಗಿದ್ದಾರೆ.





























































































error: Content is protected !!
Scroll to Top