ಕೊರೊನಾ ವೈರಸ್ ನಿಂದ ಇಡೀ ಜಗತ್ತು ಇನ್ನಿಲ್ಲದ ಸಂಕಷ್ಟಗಳನ್ನು ಅನುಭವಿಸಿರಬಹುದು. ಆದರೆ ಇದೇ ವೇಳೆ ಈ ವೈರಸ್ ಜನರಲ್ಲಿ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ಮೂಡಿಸಿದೆ. ಬಡವರಿರಲಿ ಶ್ರೀಮಂತರಿರಲಿ ಎಲ್ಲರೂ ತಮ್ಮ ಮಟ್ಟಕ್ಕನುಗುಣವಾಗಿ ಆರೋಗ್ಯ ಕಾಪಾಡುವತ್ತ ವಿಶೇಷ ಗಮನ ಹರಿಸುತ್ತಿದ್ದಾರೆ. ನಿಜವಾಗಿಯೂ ಇದು ಒಂದು ಉತ್ತಮ ಬೆಳವಣಿಗೆ. ಹೀಗಾಗಿ ಜಗತ್ತಿನೆಲ್ಲೆಡೆ 2020ನ್ನು ನಾವು ಆರೋಗ್ಯ ಕಾಳಜಿ ವರ್ಷ ಎಂದು ಕರೆಯಬಹುದು.
ಇಂತಹ ಒಂದು ಆತಂಕ ಜಗತ್ತಿನಾದ್ಯಂತ ವ್ಯಾಪಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಯಾವುದೇ ರೋಗ ಬಂದರೆ ವೈಜ್ಞಾನಿಕ ಶೋಧನೆಯ ಸಾಧನೆಯಿಂದ ಹೊಸ ಲಸಿಕೆ ದೊರಕಿ ಆ ವೈರಸ್ ಮರೆಯಯಾಗಿ ಬಿಡುತ್ತಿತ್ತು. ಆದರೆ ಕೋವಿಡ್ 19 ಎಂಬ ಕೊರೊನಾ ವೈರಸ್ ಇಡೀ ಪ್ರಪಂಚಕ್ಕೆ ವಜ್ರಾಘಾತ ಮಾಡಿದೆ. 2019ರ ಕೊನೆಗೆ ಚೀನಾದಲ್ಲಿ ಕಾಣಿಸಿಕೊಂಡ ಈ ಸಾಂಕ್ರಾಮಿಕ ವೈರಸ್ ಜೀವಗಳನ್ನು ಆಪೋಶನಗೈಯುತ್ತಲೇ ಬಂತು. ಈ ವೈರಸ್ ಮಾರ್ಚ್ ನಲ್ಲಿ ಭಾರತವನ್ನು ಪ್ರವೇಶಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಜಾರಿಗೆ ತಂದು ಅತಿಯಾಗುವ ಅನಾಹುತವನ್ನು ತಪ್ಪಿಸಿದರು.
ಸುದೀರ್ಘ ಲಾಕ್ ಡೌನ್ ಪರಿಣಾಮವಾಗಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿದೆ. ಆರೋಗ್ಯ ಬಗೆಗಿನ ಕಾಳಜಿಯೂ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ . ಮಾನ್ಯ ಪ್ರಧಾನಿಯವರು ಹೇಳಿರುವಂತೆ ಲಾಕ್ ಡೌನ್ ಗೆದ್ದಿದ್ದೇವೆ. ಇನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಬೇಕು. ಮತ್ತೆ ಮೈ ಮರೆಯಬಾರದು.

ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ








































































