ದಿ. ಎಂಪೆಕಟ್ಟೆ ರಾಮಯ್ಯ ರೈಯವರು ಯಕ್ಷಗಾನ ಕಂಡ ಅಪೂರ್ವ ಕಲಾವಿದರು . ಯಾವುದೇ ಪಾತ್ರವನ್ನಾದರೂ ಚಿತ್ರಿಸುವಲ್ಲಿ ಅವರದೇ ಛಾಪು. ಯಾವುದಾದರೂ ಪಾತ್ರ ರೈಗಳು ಮಾಡಿದರೆಂದರೆ ಮತ್ತೆ ಬೇರಾರು ಮಾಡಿದರೂ ಆ ಪಾತ್ರ ಸಪ್ಪೆಯೇ. ಅಂಥಹ ಪಾತ್ರ ಚಿತ್ರಣದಲ್ಲಿ ಸಿದ್ಧಹಸ್ತರು . ಪಾತ್ರದ ಒಳಗನ್ನು ಅರಿತು , ಪ್ರಸಂಗದ ನಡೆಯಲ್ಲೇ ಪಾತ್ರ ನಿರ್ವಹಿಸುವುದರಲ್ಲಿ ಅಗ್ರಗಣ್ಯರು . ಆ ಕಾಲದಲ್ಲಿ ಕೆಲವು ಪ್ರಸಂಗಗಳು ಎಂಪೆಕಟ್ಟೆಯವರಿಲ್ಲದಿದ್ದಲ್ಲಿ ಪ್ರದರ್ಶನ ನೀಡುವುದೇ ಸವಾಲಿನ ಕೆಲಸವಾಗಿತ್ತು. ಕೊನೆಯ ತನಕವೂ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿ ಪ್ರೇಕ್ಷಕರ ಮನವನ್ನು ಗೆದ್ದವರು . ದೇವೇಂದ್ರ , ಪೌಂಢ್ರಕ , ಕೌರವ, ಶಿಶುಪಾಲ , ಕೌಂಡ್ಲಿಕ , ಸಾಲ್ವ ಮುಂತಾದ ವಿತಂಡ ವಾದಕ್ಕೆ ಅವಕಾಶ ಇರುವ ಪಾತ್ರಗಳನ್ನು ಎಂಪೆಕಟ್ಟೆಯವರಷ್ಟು ಸಮರ್ಥವಾಗಿ ನಿರ್ವಹಿಸಬಲ್ಲ ಕಲಾವಿದರನ್ನು ನಾನು ಈಗಿನ ವರೆಗೂ ಕಂಡಿಲ್ಲ.
ಯಾವುದೇ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ರೈಗಳು ಅಪಾರವಾದ ಪೌರಾಣಿಕ ಜ್ಞಾನ , ಪ್ರಸಂಗದ ನಡೆ , ಪಾತ್ರ ಚಿತ್ರಣದ ಕೌಶಲ್ಯ ಹೊಂದಿದ್ದರು .ನವರಸಗಳನ್ನೂ ಪ್ರಸ್ತುತ ಪಡಿಸಬಲ್ಲ ಸಾಮರ್ಥ್ಯದ ರೈಗಳು ತಮ್ಮ ಅರ್ಥದಲ್ಲಿ ಹಾಸ್ಯಕ್ಕೇ ಪ್ರಾಧಾನ್ಯತೆ ಕೊಡುತ್ತಿದ್ದುದು ಎದ್ದು ಕಾಣುತ್ತಿತ್ತು . ಯುಧಾಜಿತು , ಉಸ್ಮಾನ್ , ರತ್ನಾಕರ ಶೆಟ್ಟಿ , ರಾವಣ ಮುಂತಾದ ವಿಭಿನ್ನ ಪಾತ್ರಗಳಲ್ಲಿ ರೈಯವರ ನಿರ್ವಹಣೆ ಇದಕ್ಕೆ ಸಾಕ್ಷಿಯಾಗಿತ್ತು .
ರೈಗಳ ನಿಧನ ಆಕಸ್ಮಿಕವಾಗಿ ಆದದ್ದು ಯಕ್ಷರಂಗಕ್ಕೆ ನಿಜಾರ್ಥದಲ್ಲಿ ದೊಡ್ಡ ನಷ್ಟವೇ ಹೌದು . ರೈಗಳ ನಿಧನ ವಾರ್ತೆ ಕೇಳಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಅತೀವ ದುಃಖ ಪಟ್ಟಿದ್ದರು .

” ಇನ್ನು ಕೆಲವು ಪ್ರಸಂಗಗಳನ್ನು ಆಡಿಸಲಾಗಲಿಕ್ಕಿಲ್ಲ ” ಎಂದು ಆ ಕಾಲದಲ್ಲಿ ಪ್ರೇಕ್ಷಕರೇ ಹೇಳುತ್ತಿದ್ದುದು ಸತ್ಯ .ಎದುರು ಕಲಾವಿದರೊಂದಿಗೆ ವಾದ , ಸಂವಾದ ಬೆಳೆಸುವಲ್ಲಿ ರೈಗಳ ಕ್ರಮ ಅನುಕರಣೀಯ .ಸಹ ಕಲಾವಿದರಿಗೆ ಪ್ರಸಂಗದ ಬಗ್ಗೆ ಹೇಳಿ ಕೊಡುತ್ತಿದ್ದರು .ಆ ಕಾಲದಲ್ಲಿ ಮಳೆಗಾಲದ ಪುರಭವನದ ಯಕ್ಷಗಾನ ಪ್ರದರ್ಶನಗಳಲ್ಲಿ ಎಂಪೆಕಟ್ಟೆಯವರು ” ಕಲೆಕ್ಷನ್ ದೃಷ್ಟಿಯಿಂದ ” ಅನಿವಾರ್ಯ ಕಲಾವಿದರಾಗಿದ್ದರು. ವಿತಂಡವಾದ , ಕುತರ್ಕವಿದ್ದ ಪಾತ್ರಗಳು ರೈಗಳಿಗೇ ಕೊಡಬೇಕೆನ್ನುವಷ್ಟರ ಮಟ್ಟಿಗೆ ಆ ಪಾತ್ರಗಳಿಗೆ ಚಿತ್ರಣ ನೀಡುತ್ತಿದ್ದರು . ತಾಳಮದ್ದಳೆ ಕೂಟದಲ್ಲೂ ರೈಗಳು ಭಾಗವಹಿಸುತ್ತಿದ್ದರು .ಮಾತ್ರವಲ್ಲ ಉತ್ತಮ ಅರ್ಥಧಾರಿಗಳೂ ಆಗಿದ್ದರು. ರೈಗಳದ್ದು ಮೊನಚು ಹಾಸ್ಯದ ಮಾತುಗಾರಿಕೆಯಾದರೂ ಅರ್ಥಗರ್ಭಿತ .ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ರೈಗಳಿಗೆ ಸಿದ್ಧಿಸಿತ್ತು .ಉತ್ತಮ ನಾಟ್ಯಗಾರಿಕೆ ಹೊಂದಿದ್ದು ದೇವೇಂದ್ರನ ಪ್ರವೇಶದ ” ಸಭಾಕ್ಲಾಸ್ ” ನ್ನು ಚೆನ್ನಾಗಿ ಪ್ರಸ್ತುತ ಪಡಿಸುತ್ತಿದ್ದ ಕಾರಣ , ಅಂದಿನ ಕಾಲದಲ್ಲಿ ದೇವೇಂದ್ರನ ಪಾತ್ರ ರೈಗಳಿಗೇ ಸೀಮಿತವಾಗಿತ್ತು .ರೈಗಳು ವಿಶಿಷ್ಟವಾದ ಕಂಠ ಸ್ವರ ಕುತರ್ಕ , ವಿತಂಡ ವಾದಗಳಿಗೆ ಆ ಸ್ವರ ಸರಿಯಾಗಿ ಹೊಂದುತ್ತಿತ್ತು . ತಮ್ಮ ಪಾತ್ರ ಚಿತ್ರಣಕ್ಕೆ ಪೌರಾಣಿಕ ಆಧಾರ ಕೊಟ್ಟೇ ವಾದ ಮಂಡಿಸುತ್ತಿದ್ದರು . ಕೆಲವೊಮ್ಮೆ ಕತೆಯನ್ನೇ ತಿರುಚಿ ಹೇಳಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು .( ಇದನ್ನು ಪಾತ್ರಪೋಷಣೆಗಾಗಿ ಮಾತ್ರ ಮಾಡುತ್ತಿದ್ದರೇ ಹೊರತು ಪೌರಾಣಿಕ ಪಾತ್ರಗಳಿಗೆ , ಪ್ರಸಂಗದ ಕವಿಗಳಿಗೆ ಎಂದೂ ಅಪಚಾರ ಮಾಡುತ್ತಿರಲಿಲ್ಲ ). ಹೃದಯಾಘಾತದಿಂದಾಗಿ ನಿಧನರಾಗುವವರೆಗೂ ಧರ್ಮಸ್ಥಳ ಮೇಳದಲ್ಲೇ ತಿರುಗಾಟ ನಡೆಸಿ, ಖಾವಂದರ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು . ಧರ್ಮಸ್ಥಳ ಮೇಳದಲ್ಲಿರುವಾಗ ಎಂಪೆಕಟ್ಟೆ v/s ಕುಂಬ್ಳೆ , ಎಂಪೆಕಟ್ಟೆ v/s ಗೋವಿಂದ ಭಟ್ , ಎಂಪೆಕಟ್ಟೆ v/s ನಯನಕುಮಾರ್ ಜೋಡಿ ತುಂಬಾ ಪ್ರಸಿದ್ಧಿ ಹೊಂದಿತ್ತು.
ರೈಗಳ ಅರ್ಥಗಾರಿಕೆಯ ಎರಡು ಸಂದರ್ಭ ಈ ಕೆಳಗೆ ಕೊಟ್ಟಿದೆ . ” ಗುರುದಕ್ಷಿಣೆ ” ಪ್ರಸಂಗದಲ್ಲಿ ಎಂಪೆಕಟ್ಟೆ ರೈ ಯವರದ್ದು ಕೌರವನ ಪಾತ್ರ ಅತ್ಯಂತ ಪ್ರಸಿದ್ಧ . ದ್ರುಪದನ ತಮ್ಮ ಚಿತ್ರಕ ಹಾಗೂ ಕೌರವನ ಯುದ್ಧ. ಚಿತ್ರಕನ ಪಾತ್ರಧಾರಿ ” ಎಲವೋ, ಕುರುಡನ ಮಗನೇ ” ಎಂದರು . ಕೂಡಲೇ ರೈಗಳು , ತಮ್ಮದೇ ವಿಶಿಷ್ಠ ಸ್ವರದಲ್ಲಿ

” ಏನಂದೆ ? ಯಾಕೆ ಆ ರೀತಿ ಕರೆದಿ ? ” ಎಂದರು.ಚಿತ್ರಕ ,
” ನಿನ್ನ ಅಪ್ಪ ಕುರುಡನಾದ ಕಾರಣ ನಿನ್ನನ್ನು ಕುರುಡನ ಮಗನೇ ಎಂದದ್ದು ” ಎಂದರು.ರೈಗಳು ಆತನಿಗೆ ” ನಿನ್ನ ಅಪ್ಪ ಎಲ್ಲಿದ್ದಾರೆ ?” ಎಂದಾಗ ಆತ
” ಅವರು ಸತ್ತಿದ್ದಾರೆ ” ಎಂದಾಗ , ಕೂಡಲೇ ರೈಗಳು ಅದೇ ವಿಶಿಷ್ಠ ಸ್ವರದಲ್ಲಿ
” ಓಹೋ , ಹಾಗೋ. ಹಾಗಾದರೆ ಎಲವೋ ಸತ್ತವನ ಮಗನೇ ” ಎನ್ನಬೇಕೇ?
ಮಂಗಳೂರು ಪುರಭವನದಲ್ಲೊಂದು ಯಕ್ಷಗಾನ. ಪ್ರಸಂಗ ” ಭೀಷ್ಮಾರ್ಜುನ ” . ಶೇಣಿಯವರ ಭೀಷ್ಮ , ಎಂಪೆಕಟ್ಟೆಯವರದ್ದು ಭೀಷ್ಮನನ್ನು ಸೇನಾಧಿಪತ್ಯಕ್ಕೆ ಒತ್ತಾಯಿಸುವ ಕೌರವ. ಶೇಣಿಯವರ ಎದುರು ಎಂಪೆಕಟ್ಟೆಯವರಿಂದ ಹಾಸ್ಯಭರಿತ ವಿತಂಡವಾದ. ಪ್ರೇಕ್ಷಕರಿಗೆ ಭರ್ಜರಿ ರಂಜನೆಯಾಯಿತು .ಆದರೆ , ಶೇಣಿಯವರಿಗೆ ಕೋಪ ನೆತ್ತಿಗೇರಿ, ರಂಗಸ್ಥಳದಲ್ಲೇ ಸರಿ ಜಾಲಾಡಿಸಿದರು.ಅಂತೂ ರೈಗಳ ಕೌರವನ ಪಾತ್ರ ಮುಗಿಯಿತು. ಶೇಣಿಯವರು ರಂಗದಲ್ಲೇ ಇದ್ದರು. ಭೀಷ್ಮ ಶರಶಯ್ಯೆಯಾಗಿ ಒಂದು ಪ್ರಸಂಗ ಮುಗಿಯಿತು . ನನಗೆ ಗೊತ್ತಿತ್ತು , ಶೇಣಿಯವರು ಚೌಕಿಯಲ್ಲಿ ರೈಗಳನ್ನು ಪುನಃ

ಜಾಲಾಡಿಸುತ್ತಾರೆಂದು. ಅದಕ್ಕಾಗಿ ನಾನೂ ಚೌಕಿಗೆ ಹೋದೆ. ರೈಗಳು ಚೌಕಿಯಲ್ಲಿ ವೇಷ ಕಳಚಿ ಮೂಲೆಯಲ್ಲಿ ಕುಳಿತಿದ್ದರು. ನಾನು ರೈಯವರಲ್ಲಿ ಮಾತಾಡುತ್ತಿರುವಾಗ , ಚೌಕಿಗೆ ಬಂದ ಶೇಣಿಯವರು ,
” ಓಲು ಉಲ್ಲೆ ಆ ರಾಮಯ್ಯೇ ” ಎಂದಾಗ ರೈಗಳು ” ದಾನೆ ಗುರುಕುಲೇ ” ಎಂದು ಮುಂದೆ ಬಂದರು. ಶೇಣಿಯವರು ಕೋಪದಿಂದಲೇ , ತುಳುವಿನಲ್ಲೇ, ರಂಗಸ್ಥಳದಲ್ಲಿ ಏನು ಮಾತಾಡಿದ್ದು ಎಂದರು. ರೈಗಳೂ ತುಳುವಿನಲ್ಲೇ, ಸ್ವಲ್ಪ ಭಂಡು ಭಾಷೆಯಲ್ಲಿ
” ಮತ್ತೆ ನಿಮ್ಮಂಥಹ ದೊಡ್ಡ ವಿದ್ವಾಂಸರಲ್ಲಿ ನಾನೇನು ಮಾತಾಡುವುದು ? ” ಎಂದಾಗ, ಶೇಣಿಯವರ ಕೋಪವೆಲ್ಲಾ ಇಳಿದು ಮನಃ ಪೂರ್ವಕವಾಗಿ ನಕ್ಕರು.
ಧರ್ಮಸ್ಥಳ ಮೇಳದವರ ಒಂದು ವರ್ಷದ ತಿರುಗಾಟದ ಪ್ರಸಂಗ “ಚಕ್ರವರ್ತಿ ದಶರಥ ” ಮುಂಜಾನೆ ನಾಲ್ಕು ಗಂಟೆವರೆಗೂ ಒಂದೇ ಒಂದು ಹಾಸ್ಯದ ಸನ್ನಿವೇಶವಿಲ್ಲ . ನಾಲ್ಕು ಘಂಟೆ ಹೊತ್ತಿಗೆ ಎಂಪೆಕಟ್ಟೆಯವರು ರಾವಣನಾಗಿ ಪ್ರವೇಶ ಕೊಟ್ಟ ನಂತರವೇ ಪ್ರಸಂಗದಲ್ಲಿ ಹಾಸ್ಯರಸ ಚಿಮ್ಮಿ ಪ್ರಸಂಗ ಕಳೆಕಟ್ಟುತ್ತಿತ್ತು .
” ಸೀತಾ ಸ್ವಯಂವರ ” ದ ಈ ಭಾಗದಲ್ಲಿ ಎಂಪೆಕಟ್ಟೆಯವರ ರಾವಣನ ಪಾತ್ರವಂತೂ ಎಂದೂ ಮರೆಯಲಾಗದ್ದು .
ಎಂ.ಶಾಂತರಾಮ ಕುಡ್ವ, ಮೂಡಬಿದಿರೆ





































