ದಿಲ್ಲಿ, ಸೆ.13: ಹಾಲು ಅಥವಾ ಬಿಸಿ ನೀರಿನಲ್ಲಿ ಕಲಸಿ ನಿತ್ಯ ಒಂದು ಚಮಚಾ ಚ್ಯವನಪ್ರಾಶ ಸೇವಿಸಿ, ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಮಾಡಿ ಮತ್ತು ನಿತ್ಯ ಯೋಗಾಸನ ಮಾಡಿ. ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರಿಗಾಗಿ ಬಿಡುಗಡೆಗೊಳಿಸಿರುವ ಶಿಷ್ಟಾಚಾರದ ಮಾರ್ಗಸೂಚಿ. ಕೊರೋನಾದಿಂದ ಗುಣಮುಖರಾದವರು ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.
“ಎಷ್ಟು ಸಾಧ್ಯವೋ ಅಷ್ಟು ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ದೈನಂದಿನ ಅಭ್ಯಾಸ ಮಾಡುವುದು ಉತ್ತಮ. ವೈದ್ಯರ ಸಲಹೆಯಂತೆ ಉಸಿರಾಟದ ವ್ಯಾಯಾಮ ಕೂಡ ಪ್ರಯೋಜನಕಾರಿ. ಬೆಳಿಗ್ಗೆ ಅಥವಾ ಸಂಜೆ ಆರಾಮದಾಯಕ ವೇಗದಲ್ಲಿ ನಡೆಯುವುದು ಒಳ್ಳೆಯದು ”ಎಂದು ಸಚಿವಾಲಯ ಹೇಳಿದೆ.
ಉಳಿದಂತೆ ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಉಸಿರಾಟದ ನೈರ್ಮಲ್ಯ, ಸಾಮಾಜಿಕ ಅಂತರ ಕಾಪಾಡುವುದು ಈ ಮುಂತಾದ ಸಲಹೆ ಸೂಚನೆಗಳು ಇವೆ. ಸಾಕಷ್ಟು ಪ್ರಮಾಣದ ಬೆಚ್ಚಗಿನ ನೀರನ್ನು ಕುಡಿಯಲು ಸಲಹೆ ಮಾಡಿದೆ.




















