ಕಾರ್ಕಳ, ಆ. 24: ಬೆಳ್ಮಣ್ ಪೇಟೆ ಮತ್ತು ಆಸುಪಾಸಿನಲ್ಲಿ ಈಗಾಗಲೇ ಕೊರೊನಾ ಪರೀಕ್ಷೆ ನಡೆದಿರುವುದರಿಂದ ಇದೀಗ rapid test ಹೆಸರಿನಲ್ಲಿ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸುವುದಕ್ಕೆ ಇಲ್ಲಿನ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಒಂದು ಸಲ ಬೆಳ್ಮಣ್ ಪೇಟೆ ಸೀಲ್ಡೌನ್ ಕೂಡ ಆಗಿದೆ. ಕಳೆದ ಐದು ತಿಂಗಳಿಂದ ಲಾಕ್ಡೌನ್, ಸೀಲ್ಡೌನ್ ಎಂದು ಸರಿಯಾಗಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಆರ್ಥಿಕ ನಷ್ಟವುಂಟಾಗಿ ಕಂಗಾಲಾಗಿದ್ದಾರೆ.
ಇದೀಗ ಮಾಸ್ಕ್ , ಗ್ಲೌಸ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಂದು ಕೊರೊನಾದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ವ್ಯಾಪಾರ ಮಾಡುತ್ತಿದ್ದೇವೆ. ನೌಕರರ ಆರೋಗ್ಯ ರಕ್ಷಣೆಗೆ ಗರಿಷ್ಠ ಆದ್ಯತೆ ನೀಡಿದ್ದೇವೆ. ಹೀಗಿರುವಾಗ ಇನ್ನೊಂದು ಸುತ್ತಿನ ಕೊರೊನಾ ಪರೀಕ್ಷೆಯ ಅಗತ್ಯವೇನು ಎಂದು ಇಲ್ಲಿನ ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ.

ಕಾರ್ಮಿಕರಿಗೂ 15 ದಿನ ರಜೆ ಕೊಟ್ಟು ಸಂಬಳ ಪಾವತಿಸಿದ್ದೇವೆ. ಕೊರೊನಾಕ್ಕಿಂತಲೂ ಅದರ ಕುರಿತಾದ ಅಪಪ್ರಚಾರ ಹಾಗೂ ಭೀತಿಯಿಂದಲೇ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೊರೊನಾದ ಯಾವ ಲಕ್ಷಣ ಇಲ್ಲದಿದ್ದರೂ ಪರೀಕ್ಷೆ ಮಾಡಿ ಪೊಸೆಟಿವ್ ಎಂದು ವರದಿ ಕೊಟ್ಟು ಮಾನಸಿಕವಾಗಿ ಹಿಂಸೆ ನೀಡಿದ ಕೆಲವು ಪ್ರಕರಣಗಳೂ ಇವೆ.ಹೀಗಾಗಿ ಕಾರ್ಮಿಕರನ್ನು rapid testಗೆ ಒಳಪಡಿಸುವ ನಿರ್ಧಾರವನ್ನು ಕೈಬಿಡಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.































