ದಿಲ್ಲಿ : ವಿಶ್ವ ಹಿಂದೂ ಪರಿಷತ್ ನ ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಅದರ ಮುಖಪುಟದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ವಿಎಚ್ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ವೆಬ್ಸೈಟ್ ಅನ್ನು ಬೆಳಿಗ್ಗೆ ಹ್ಯಾಕ್ ಮಾಡಲಾಗಿದ್ದು ಅದಕ್ಕಾಗಿ ವಿಎಚ್ಪಿಯ ಉನ್ನತ ನಾಯಕರು ತಾತ್ಕಾಲಿಕವಾಗಿ ಸೈಟ್ ಅನ್ನು ಮುಚ್ಚಲು ನಿರ್ಧರಿಸಿದ್ದಾರೆ. ಸೈಟ್ಗೆ ಲಾಗ್ ಇನ್ ಆದಾಗ ಅದು “ನಿರ್ವಹಣೆಯಲ್ಲಿದೆ” ಎಂದು ತೋರಿಸುತ್ತಿದೆ.
ಹ್ಯಾಕರ್ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಗೃಹ ಸಚಿವಾಲಯ (ಎಂಎಚ್ಎ) ಮತ್ತು ದಿಲ್ಲಿ ಸೈಬರ್ ಸೆಲ್ ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.
ಹ್ಯಾಕರ್ಗಳು ವೆಬ್ಸೈಟ್ನಲ್ಲಿ ಪ್ರಚೋದನಕಾರ ಘೋಷಣೆಗಳನ್ನು ಪೋಸ್ಟ್ ಮಾಡಿರುವುದು ಆತಂಕದ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.
ವೆಬ್ಸೈಟ್ನಲ್ಲಿ ಮುಸ್ಲಿಮರ ನರಮೇಧ ಬೇಡ, ಹಿಂದುತ್ವ ಬೇಡ, ದಲಿತರು ಮತ್ತು ಮುಸ್ಲಿಮರು ಮೋದಿ ಸರ್ಕಾರದ ವಿರುದ್ಧ ಹೋರಾಡಬೇಕು ಎಂಬ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು.
“ಇದು ಸಣ್ಣ ಘಟನೆಯಲ್ಲ. ಇದು ನಮ್ಮ ಬೆಂಬಲಿಗರನ್ನು ಮತ್ತು ಸದಸ್ಯರನ್ನು ಕೆರಳಿಸುವ ಷಡ್ಯಂತ್ರ. ಇದು ಕೋಮು ಗೊಂದಲವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ” ಎಂದು ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ 2013 ರಲ್ಲಿ, ವಿಎಚ್ಪಿಯ ಅಧಿಕೃತ ಫೇಸ್ಬುಕ್ ಪುಟವನ್ನು ಹ್ಯಾಕ್ ಮಾಡಲಾಗಿತ್ತು. ನಂತರ ಅದರ ನಾಯಕರು “ದುರುದ್ದೇಶಪೂರಿತ ಧಾರ್ಮಿಕ ಮತ್ತು ರಾಜಕೀಯ” ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.