ಕಾರ್ಕಳ : ಚಾತುರ್ಮಾಸ್ಯ ಭಗವಂತನಿಗೆ ಅತ್ಯಂತ ಪ್ರಿಯವಾದ ಸಮಯ. ಈ ನಾಲ್ಕು ತಿಂಗಳುಗಳ ಕಾಲ ಭಗವಾನ್ ವಿಷ್ಣುವು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ. ಈ ಸಂದರ್ಭ ಭಗವಂತನ ಅನುಗ್ರಹ ಪಡೆಯಲು ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ ಎಂದು ಅರೇಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ನುಡಿದರು.
ಅವರು ತಮ್ಮ 44ನೇ ಚಾತುರ್ಮಾಸ್ಯದ ಪ್ರಯುಕ್ತ ಕ್ಷೇತ್ರ ಭೇಟಿಯ ಹಿನ್ನೆಲೆಯಲ್ಲಿ ಜೂ. 29ರಂದು ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನಗೈದು ತಮ್ಮ ಹಾಗೂ ಕಿರಿಯ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಸ್ವಾಮೀಜಿಯವರ ಪ್ರಥಮ ಚಾತುರ್ಮಾಸ್ಯ ವ್ರತಾನುಷ್ಠಾನದ ಬಗ್ಗೆ ತಿಳಿಸಿದರು.
ಈ ಸಂದರ್ಭದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರರಾದ ನಿಟ್ಟೆ ಸುರೇಶ್ ಆಚಾರ್ಯ, ಪಿ. ರವಿ ಆಚಾರ್ಯ, ಪಿ. ವಸಂತ್ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ್ ವಿಠಲ್ ಆಚಾರ್ಯ, ಮ್ಯಾನೇಜರ್ ದಿನೇಶ್ ಆಚಾರ್ಯ, ಕ್ಷೇತ್ರದ ಅಂಗಸಂಸ್ಥೆಗಳ ಪದಾಧಿಕಾರಿಗಳು, ಭಕ್ತವೃಂದದವರು ಉಪಸ್ಥಿತರಿದ್ದರು. ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶಿಷ್ಯರು ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿ, ಎಂ. ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











