ಸ್ಥಳೀಯರ ಸ್ಪಂದನೆ – ಗಾಯಾಳುವಿಗೆ ಚಿಕಿತ್ಸೆ – ತಾತ್ಕಾಲಿಕವಾಗಿ ಮನೆ ದುರಸ್ತಿ
ಕಾರ್ಕಳ : ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಯೂರಿನಲ್ಲಿ ಜು.25ರಂದು ಬೆಳಿಗ್ಗೆ ಬೀಸಿದ ಗಾಳಿ ಮಳೆಗೆ ಗೀತಾ ಆಚಾರ್ಯ ಎಂಬವರ ಮನೆಗೆ ಮರ ಬಿದ್ದು, ಭಾರೀ ಹಾನಿ ಸಂಭವಿಸಿದೆ.
ಮುಂಜಾನೆ 6 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಮರ ಬಿದ್ದ ಪರಿಣಾಮವಾಗಿ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಈ ವೇಳೆ ಗೀತಾ ಆಚಾರ್ಯ ಅವರ ಗಂಡ ಜನಾರ್ಧನ ಆಚಾರ್ಯ ಅವರು ಗಾಯಗೊಂಡಿದ್ದು ತಕ್ಷಣವೇ ಅವರನ್ನು ಬೋಳ ಜಯರಾಮ್ ಸಾಲಿಯಾನ್ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಬೋಳ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 1.50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ದುರಸ್ತಿ ಕಾರ್ಯ
ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಸೇರಿದಂತೆ ಇತರೆ ಭಾಗಗಳಿಗೆ ಹಾನಿಗೀಡಾಗಿದೆ. ಸ್ಥಳೀಯ ಜನತೆ ಸೇರಿ ಸದ್ಯಕ್ಕೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿದ್ದಾರೆ. ಸ್ಥಳೀಯರಾದ ಜಯರಾಮ್ ಸಾಲಿಯಾನ್, ಮಹಾಬಲ ಮೂಲ್ಯ, ಶಂಬು ಮೂಲ್ಯ, ರಘುನಾಥ್ ಕುಲಾಲ್, ಬೋಳ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ವಿಶಾಲ್ ಜೆ. ಸಾಲಿಯಾನ್, ನವಚೇತನ ಸೇವಾ ಬಳಗ ತೊಡರು ಅಧ್ಯಕ್ಷ ಕಿರಣ್ ಕುಲಾಲ್, ನಿತಿನ್ ಕುಲಾಲ್ ಬೋಳ, ಹರಿಶ್ಚಂದ್ರ ಆಚಾರ್ಯ, ಸುಕೇಶ್ ಬೋಳ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕವಾಗಿ ಮನೆಯ ದುರಸ್ತಿ ಕಾರ್ಯದಲ್ಲಿ ಕೈಜೋಡಿಸಿ ಕುಟುಂಬಕ್ಕೆ ನೆರವಾದರು.
















