ಉಡುಪಿ : ಆನೆಕೆರೆ ಫುಡ್ ಬಾಸ್ಕೆಟ್ ಸಮೀಪ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯಾಗಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ. ಭಾರಿ ವಾಹನ ಚಾಲಕರು ಪರ್ಯಾಯ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿ ಸ್ವರೂಪ ಅವರು ಆದೇಶ ಹೊರಡಿಸಿದ್ದಾರೆ. ಎ. 20ರವರೆಗೆ ಈ ನಿರ್ಬಂಧ ಜಾರಿಯಲ್ಲಿದ್ದು, ಕೇವಲ ಬಸ್ ಮತ್ತು ಲಾರಿಗಳ ಸಂಚಾರಕ್ಕೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
ಪ್ರಸ್ತುತ ರಸ್ತೆ ಕಿರಿದಾಗಿದ್ದು ಭಾರಿ ವಾಹನಗಳ ಸಂಚಾರದಿಂದ ಕಾಮಗಾರಿಗೆ ಅಡ್ಡಿಯಾಗುವ ಹಾಗೂ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಸಂಚಾರ ನಿಷೇಧಿಸಲಾಗಿದೆ.
ಪರ್ಯಾಯ ರಸ್ತೆ
ಈ ರಸ್ತೆ ಮೂಲಕ ಭಾರಿ ವಾಹನ ಸಂಚಾರ ನಿಷೇಧ ಹೇರಿರುವುದರಿಂದ ಮಂಗಳೂರು, ಮೂಡುಬಿದಿರೆ ಹಾಗೂ ಪಡುಬಿದ್ರಿಗೆ ತೆರಳುವ ಭಾರಿ ವಾಹನಗಳು ಕುಂಟಲ್ಪಾಡಿ ರಸ್ತೆಯ ಮೂಲಕ ಸಂಚರಿಸುವಂತೆ ತಿಳಿಸಲಾಗಿದೆ. ಇನ್ನು ಧರ್ಮಸ್ಥಳದ ಕಡೆಗೆ ಸಾಗುವ ವಾಹನಗಳು ಬಾಹುಬಲಿ ಬೆಟ್ಟದ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.






























