ಭಾರತದಲ್ಲಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ‘ಎಕ್ಸ್​’ ಖಾತೆ ನಿರ್ಬಂಧ

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮೊದಲು, 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಸರಕಾರದ ಎಕ್ಸ್ ಖಾತೆಯನ್ನು ಕೂಡ ಭಾರತದಲ್ಲಿ ನಿರ್ಬಂಧಿಸಲಾಗಿತ್ತು.

ಪಾಕಿಸ್ತಾನದ ರಕ್ಷಣಾ ಸಚಿವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಸಿಫ್ ತಮ್ಮ ಒಂದು ಹೇಳಿಕೆಯಲ್ಲಿ, ಚೀನಾ ಕೂಡ ಕಾಶ್ಮೀರದ ಒಂದು ಭಾಗವನ್ನು ಹೊಂದಿದೆ ಎಂದು ಹೇಳಿದ್ದಾರೆ. ಬೀಜಿಂಗ್ ಇಡೀ ಕಾಶ್ಮೀರ ಸಮಸ್ಯೆಯಲ್ಲಿ ಸಹ ಪಾಲುದಾರ. ಸಿಂಧೂ ನದಿ ಕೂಡ ಚೀನಾದ ಮೂಲಕ ಹಾದುಹೋಗುತ್ತದೆ, ಅದು ಟಿಬೆಟ್‌ನಿಂದ ಬಂದಿದೆ. ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸಿದೆ ಎಂದು ಹೇಳಿದ್ದರು.

ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಬೆದರಿಕೆಯನ್ನು ಆಸಿಫ್ ಒಪ್ಪಿಕೊಂಡಿದ್ದಾರೆ, ಭಾರತ ಯಾವುದೇ ಸಮಯದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು ಎಂದು ಹೇಳಿದ್ದಾರೆ. ಪಾಕಿಸ್ತಾನವು ಹೆಚ್ಚು ಜಾಗರೂಕವಾಗಿದೆ ಎಂದು ಹೇಳಿಕೊಳ್ಳುತ್ತಾ, ಪಾಕಿಸ್ತಾನದ ಪರಮಾಣು ಸಾಮರ್ಥ್ಯವನ್ನು ಒತ್ತಿ ಹೇಳಿದರು, ದೇಶದ ಅಸ್ತಿತ್ವಕ್ಕೆ ನೇರ ಬೆದರಿಕೆ ಇದ್ದಾಗ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ಹೇಳಿದರು.

ಸಂದರ್ಶನವೊಂದರಲ್ಲಿ ಆಸಿಫ್ ಮೊದಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮುಂದಿನ ಎರಡು ಮೂರು ದಿನಗಳಲ್ಲಿ ಯುದ್ಧ ಆರಂಭವಾಗಬಹುದು ಎಂದು ಹೇಳಿದ್ದರು. ಆದರೆ ನಂತರ ಅವರು ತಮ್ಮ ಮಾತಿನಿಂದ ಹಿಂದೆ ಸರಿದಂತೆ ಕಂಡುಬಂದರು. ಅದಕ್ಕೂ ಮೊದಲು ಭಯೋತ್ಪಾದನೆ ಕುರಿತು ಖ್ವಾಜಾ ಮಾತನಾಡಿದ್ದರು.

ಭಯೋತ್ಪಾದನೆ ಬೆಂಬಲಿಸುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನವು ತಮ್ಮ ನೀಚ ಕೃತ್ಯವನ್ನು ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್​ ನಾವು 3 ದಶಕಗಳಿಂದ ಈ ನೀಚ ಕೆಲಸ ಮಾಡುತ್ತಿದ್ದೀವಿ ಎಂದು ಹೇಳಿದ್ದಾರೆ. ಒಂದು ಸಂದರ್ಶನದಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದಾಗಿ ಒಪ್ಪಿಕೊಂಡಿದ್ದರು.

ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತಿದೆ ಮತ್ತು ತರಬೇತಿ ನೀಡುವ ದೀರ್ಘ ಇತಿಹಾಸ ಹೊಂದಿದೆ ಎನ್ನುವ ಆರೋಪದ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಿದಾಗ ಖ್ವಾಜಾ, ನಾವು 3 ದಶಕಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸ ಮಾಡುತ್ತಿದ್ದೇವೆ. ಅದು ತಪ್ಪು ನಾವು ಅದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ ಎಂದರು. ಪಾಕಿಸ್ತಾನ ಗುರುವಾರ ಭಾರತದೊಂದಿಗಿನ ಶಿಮ್ಲಾ ಒಪ್ಪಂದ ಮತ್ತು ಇತರ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತುಗೊಳಿಸಿದೆ.

ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಪಾಕಿಸ್ತಾನವು ವಾಘಾ ಗಡಿ ದಾಟುವಿಕೆಯನ್ನು ಸಹ ಮುಚ್ಚಿತು, ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಭಾರತೀಯ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ಸ್ಥಗಿತಗೊಳಿಸಿತು ಮತ್ತು ಭಾರತೀಯ ಹೈಕಮಿಷನ್‌ನಲ್ಲಿರುವ ಮಿಲಿಟರಿ ಸಲಹೆಗಾರರನ್ನು ಹೊರಹೋಗುವಂತೆ ಕೇಳಿತು.







































































error: Content is protected !!
Scroll to Top