ಕಾರ್ಕಳ : ನಾವು ಪಡೆಯುವ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಹೊಂದುವಲ್ಲಿ ಸಾಹಿತ್ಯ ಕಲೆಯ ಪಾತ್ರ ಮಹತ್ವವಾದುದು. ಸಾಹಿತ್ಯ ಅಭಿರುಚಿಯನ್ನು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಸಂತೋಷ ಹೊಂದಲು ಸಾಧ್ಯ ಎಂದು ಎಸ್ವಿಟಿ ವನಿತಾ ಪದವಿ ಪೂರ್ವ ಕಾಲೇಜು ಉಪನ್ಯಾಸಕ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ಅಭಿಪ್ರಾಯಪಟ್ಟರು.
ಅವರು ಎಸ್.ವಿ.ಟಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 5ರಂದು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿದರು.
ಮಾರ್ಕ್ಸ್ ಗಳಿಸುವುದೊಂದೆ ಶಿಕ್ಷಣದ ಪರಿಪೂರ್ಣತೆ ಅಲ್ಲ. ರಿಮಾರ್ಕ್ಸ್ ಇಲ್ಲದೆ ಜೀವನವನ್ನು ನಡೆಸುವಂತೆ ಮಾಡುವುದೇ ಶಿಕ್ಷಣ ಎಂದ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳೆರಡೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಇದರಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮಾಲಿನಿ ಕೆ., ಸಾಹಿತ್ಯ ಸಂಘದ ಮಾರ್ಗದರ್ಶಕಿ ಲವೀನಾ ಪಿಂಟೋ, ಸಾಂಸ್ಕೃತಿಕ ಸಂಘದ ಮಾರ್ಗದರ್ಶಕಿ ಅಂಬಿಕಾ ಅರುಣ್, ಜಯಲಕ್ಷ್ಮಿ ನಾಯಕ್, ಜ್ಯೋತಿ ಪಾಠಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸುವೀಕ್ಷಾ ಸ್ವಾಗತಿಸಿ, ಶಾನ್ವಿತಾ ಕಾರ್ಯಕ್ರಮ ನಿರೂಪಿಸಿದರು. ವೈಭವಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
































