ಬೆಂಗಳೂರು : ಇಸಿಸ್ ಭಯೋತ್ಪಾದನೆ ಸಂಚು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರ ಸೇರಿ 13 ಮಂದಿಯನ್ನು ಬಂಧನಕ್ಕೊಳಪಡಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸ್ ಪಡೆಗಳ ನೆರವಿನೊಂದಿಗೆ ಎನ್ಐಎ ಇಂದು ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆಲಿ ಅಬ್ಬಾಸ್ ಪೇಟಿವಾಲ ಎಂಬಾತನನ್ನು ಎನ್ಐಎ ವಶಕ್ಕೆ ಪಡೆದಿದೆ. ಐಸಿಸ್ನೊಂದಿಗೆ ಸಂಪರ್ಕ ಹೊಂದಿರುವ ಮುಂಬೈ ಮೂಲದ ಅಲಿ ಅಬ್ಬಾಸ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಈತ ಒಂದು ವರ್ಷದ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಸಂದರ್ಭದಲ್ಲಿ ಕೆಲಸ ಬಿಟ್ಟಿದ್ದು, ಪತ್ನಿ ನ್ಯೂಟ್ರಿಕೇರ್ ಆಸ್ಪತ್ರೆ ನಡೆಸುತ್ತಿದ್ದಾಳೆ. ಈ ನಡುವೆ ಕೆಲಸ ಬಿಟ್ಟು ಸ್ಥಳೀಯವಾಗಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಇತರರನ್ನು ಸೇರಿಸಿಕೊಂಡಿದ್ದಾನೆ. ಗ್ರೂಪ್ನಲ್ಲಿ ತನ್ನ ವಿಚಾರ ಒಪ್ಪುವ, ತನ್ನ ಪರವಾಗಿ ಮಾತನಾಡುವವರನ್ನು ಬೇರೊಂದು ಗ್ರುಪ್ಗೆ ಆಡ್ ಮಾಡುತ್ತಿದ್ದ.
ಹೀಗೆ ಸ್ಥಳೀಯವಾಗಿ ವಾಟ್ಸಪ್, ಟೆಲಿಗ್ರಾಂ ಹಲವು ಗ್ರುಪ್ ಗಳನ್ನು ಮಾಡಿದ್ದ ಈತಸ ತನ್ನ ವಿಚಾರ ಒಪ್ಪುವವರಿಗೆಲ್ಲ ಬೇರೊಂದು ಗ್ರುಪ್ ಮಾಡಿ ಅದರಲ್ಲಿ ಪ್ರಚೋದನೆ ನೀಡುವ ಹೇಳಿಕೆ ಕಳುಹಿಸುತ್ತಿದ್ದ. ತೀರಾ ಹತ್ತಿರದವರಿಗೆ ವಾಟ್ಸಪ್ ಯೂಸ್ ಮಾಡದಂತೆ ಹೇಳುತ್ತಿದ್ದ. ವಾಟ್ಸಪ್ಗಿಂತ ಟೆಲಿಗ್ರಾಂ ಸುರಕ್ಷಿತ. ಅದನ್ನೇ ಬಳಸುವಂತೆ ಸೂಚನೆ ನೀಡುತ್ತಿದ್ದ. ಈತನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಗಳಿವೆ.
































