ಪಠ್ಯಪುಸ್ತಕಗಳ ಪರಿಷ್ಕರಣೆಗೆ ರಾಜ್ಯ ಸರಕಾರದಿಂದ 5 ಸಮಿತಿ ರಚನೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರ ಹೊಸ ಪಠ್ಯಪುಸ್ತಕ ರಚನೆ ಮಾಡಲು ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಕೆಲ ಪಠ್ಯ ಕೈ ಬಿಟ್ಟಿದ್ದ ಕಾಂಗ್ರೆಸ್ ‌ಸರಕಾರ, ಈಗ ಮುಂದಿನ ವರ್ಷದಿಂದ ಹೊಸ ಪಠ್ಯಪುಸ್ತಕ ರಚನೆ ಮಾಡುವುದಕ್ಕೆ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪರಿಷ್ಕರಣೆ ರದ್ದು ಮಾಡಲಾಗಿದ್ದು ಈಗ ಇಡೀ ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರಕಾರ ಸಮಿತಿ ನೇಮಕ ಮಾಡಿದೆ.

1 ರಿಂದ 10ನೇ ತರಗತಿಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರಕಾರ ಐದು ಸಮಿತಿ ರಚನೆ ಮಾಡಿದೆ. ಕನ್ನಡ, ಸಮಾಜ ವಿಜ್ಞಾನ ವಿಷಯಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ‌ನಿರ್ಧಾರ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣೆಗೆ 38 ಜನ ತಜ್ಞರ ಸಮಿತಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಒಬ್ಬರು ಮುಖ್ಯ ಸಂಯೋಜಕರು, 5 ಜನ ಅಧ್ಯಕ್ಷರು, 37 ಜನ ಸದಸ್ಯರನ್ನು ನೇಮಕ ಮಾಡಲಾಗಿದೆ. 3 ತಿಂಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಸರಕಾರಕ್ಕೆ ವರದಿ ನೀಡಲು‌ ಸೂಚಿಸಲಾಗಿದೆ. 2024-25ನೇ ಸಾಲಿನಿಂದ ಪರಿಷ್ಕೃತ ಪಠ್ಯ ಜಾರಿಗೆ ತರಲು ರಾಜ್ಯ ಸರಕಾರ ಸಿದ್ದತೆ ನಡೆಸಿದೆ.

ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು 2005 ಅನ್ವಯ ಪಠ್ಯ ಪರಿಷ್ಕರಣೆಗೆ ರಾಜ್ಯ ಕಾಂಗ್ರೆಸ್ ಸರಕಾರ ಸಮಿತಿ ನೇಮಕ ಮಾಡಿದೆ. 1-10 ನೇ ತರಗತಿ ಕನ್ನಡ ಪ್ರಥಮ ಭಾಷೆ, ದ್ವೀತಿಯ ಭಾಷೆ, ತೃತೀಯ ಭಾಷೆ ವಿಷಯಗಳ ಪಠ್ಯಪುಸ್ತಕ ಪರಿಷ್ಕರಣೆಗೆ ಸೂಚನೆ ನೀಡಲಾಗಿದೆ. ಇದಲ್ಲದೆ ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆಗೊಂಡಿದ್ದ 6-10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳ ಪರಿಷ್ಕರಣೆಗೆ ಸೂಚಿಸಲಾಗಿದೆ.

ಸಮಿತಿ
ಉತ್ತರ ಕನ್ನಡ ಜಿಲ್ಲೆಯ ಡಾ. ಮಂಜುನಾಥ ಜಿ ಹೆಗಡೆ ಅವರು ಪಠ್ಯಪುಸ್ತಕ ಸಮಿತಿಯ ಮುಖ್ಯ ಸಂಯೋಜಕರು. 1-10ನೇ‌ ತರಗತಿ ಪ್ರಥಮ ಭಾಷೆ ಕನ್ನಡ ವಿಷಯದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ ಹಾಗೂ 9 ಜನ ಸದಸ್ಯರಿರಲಿದ್ದಾರೆ.

1-10 ನೇ ತರಗತಿ ದ್ವೀತಿಯ ಭಾಷೆ ಕನ್ನಡ ವಿಷಯಕ್ಕೆ ಚಿಕ್ಕಮಗಳೂರು ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.‌ H.S.ಸತ್ಯನಾರಾಯಣ ಹಾಗೂ 9 ಜನ ಸದಸ್ಯರನ್ನು ನೇಮಕ ಮಾಡಲಾಗಿದೆ.

9-10ನೇ ತರಗತಿ ತೃತೀಯ ಭಾಷೆ ಕನ್ನಡ ವಿಷಯ ಪರಿಷ್ಕರಣೆಗೆ ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮಂಜಣ್ಣ ಹಾಗೂ 3 ಜನ ಸದಸ್ಯರಿರಲಿದ್ದಾರೆ.

6 ಮತ್ತು 7 ನೇ ತರಗತಿ ಸಮಾಜ ವಿಜ್ಞಾನ ವಿಷಯಕ್ಕೆ ಕಲಬುರಗಿ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್, 6 ಜನ ಸದಸ್ಯರಿರಲಿದ್ದಾರೆ.

8, 9, 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಕ್ಕೆ ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಅಶ್ವಥ್ ನಾರಾಯಣ ಹಾಗೂ 9 ಜನ ಸದಸ್ಯರಿರಲಿದ್ದಾರೆ.







































































error: Content is protected !!
Scroll to Top