ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ಚಿನ್ನ ಎಗರಿಸಿದ ಕಳ್ಳರು
ಕೊಲ್ಲೂರು: ಕೊಲ್ಲೂರು ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಸುಮಾರು 4.75 ಲ.ರೂ. ಮೌಲ್ಯದ ಆಭರಣ ಕಳ್ಳತನವಾದ ಘಟನೆ ಸಂಭವಿಸಿದೆ. ಮೂಲತಃ ಕೇರಳದ ಕಾಸರಗೋಡು ಶಾರದಾ ನಗರದ ಹಣಂಗೋಡಿನವರಾಗಿರುವ ಪ್ರಸ್ತುತ ಸುರತ್ಕಲ್ನಲ್ಲಿರುವ ದಂಪತಿ ಮಕ್ಕಳೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಶ್ರೀ ದೇವಿಯ ದರ್ಶನಕ್ಕೆಂದು ಜೂ. 4ರಂದು ಬಂದಿದ್ದರು. ಅವರ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ಚಿಕ್ಕ ಪರ್ಸ್ನಲ್ಲಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವು ಆದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರತ್ಕಲ್ನಲ್ಲಿರುವ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರವೀಣ ಹಾಗೂ ವಾಣಿಶ್ರೀ ದಂಪತಿ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ನಲ್ಲಿ ಹಾಕಿ ವ್ಯಾನಿಟಿ ಬ್ಯಾಗ್ನಲ್ಲಿ ಜೋಪಾನವಾಗಿಟ್ಟುಕೊಂಡು ಶ್ರೀದೇವಿಯ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿ ದೇಗುಲದ ಹೊರಗಡೆ ಬಂದ ವಾಣಿಶ್ರೀ ಅವರು ವ್ಯಾನಿಟಿ ಬ್ಯಾಗ್ ತೆರೆದಿರುವುದನ್ನು ಗಮನಿಸಿ ನೋಡಿದಾಗ ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಾಣೆಯಾಗಿತ್ತು.
ಪರ್ಸ್ನಲ್ಲಿ ಏಳೂವರೆ ಪವನ್ ಚಿನ್ನದ ಚೈನ್, ಒಂದೂವರೆ ಪವನ್ನ ಎರಡು ಚಿನ್ನದ ಬಳೆ, ಒಂದೂವರೆ ಪವನ್ ತೂಕದ ಒಂದು ಚಿನ್ನದ ಚೈನ್, ಅರ್ಧ ಪವನ್ ಒಂದು ಚಿನ್ನದ ಬಳೆ, ಒಂದು ಪವನ್ ತೂಕದ ನಾಲ್ಕು ಜತೆ ಕಿವಿಯೋಲೆ ಸಹಿತ ಒಟ್ಟು ಹದಿಮೂರೂವರೆ ಪವನ್ ಚಿನ್ನಾಭರಣ ಇತ್ತು. ಅದರ ಒಟ್ಟು ಮೌಲ್ಯ 4.75 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.