ಕಾರ್ಕಳ : ವಿವಿಧ ಇಲಾಖೆ, ಶಿಕ್ಷಣ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ತಾಲೂಕಿನ ವಿವಿಧೆಡೆ ಎ. 14 ರಂದು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ನಡೆಯಿತು.
ಅಂಬೇಡ್ಕರ್ ಅವರ ತತ್ವಾದರ್ಶ ಜೀವನದ ಸಾಧನೆ ಸ್ಫೂರ್ತಿದಾಯಕ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವಾದರ್ಶ ಮತ್ತು ಜೀವನದ ಸಾಧನೆಗಳು ಸ್ಫೂರ್ತಿದಾಯಕ. ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತಾ ನಿವಾರಣೆಗಾಗಿ ಅವರು ಹೋರಾಡಿದ ಬಗೆ ಎಂದಿಗೂ ಅಮರ ಎಂದು ಎಸ್. ವಿ. ಟಿ ವನಿತಾ ಪದವಿ ಪೂರ್ವ ಕಾಲೇಜಿನ ಸಹಾಯಕ ಅಧ್ಯಾಪಕ ದೇವದಾಸ್ ಕೆರೆಮನೆ ಅಭಿಪ್ರಾಯಪಟ್ಟರು. ಅವರು ಮೈನ್ ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಹಿರಿಯ ಸಾಹಿತಿ ರಾಧಾಕೃಷ್ಣ ತೊಡಿಕಾನ, ಮಾನಸ ಕಲಾ ಶಾಲೆಯ ಚಿತ್ರಕಲಾ ಶಿಕ್ಷಕ ಚಂದ್ರನಾಥ ಬಜಗೋಳಿ, ಚಿತ್ರ ಕಲಾ ಶಿಕ್ಷಕಿ ಜ್ಯೋತ್ಸ್ನಾ, ವಂದಿತ್, ಪ್ರಜ್ವಲ್ ಆಚಾರ್ಯ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪ್ರತಿಮಾ ದೇವದಾಸ್ ಕಾರ್ಯಕ್ರಮ ನಿರ್ವಹಿಸಿದರು.
ಜಾತಿಪದ್ಧತಿಯನ್ನು ಬಿಟ್ಟು ನಾವೆಲ್ಲರೂ ಒಂದೇ ಎಂದು ಬದುಕಿದಾಗ ದೇಶ ಅಭಿವೃದ್ಧಿ
ಜಾತಿಪದ್ಧತಿಯನ್ನು ಬಿಟ್ಟು ನಾವೆಲ್ಲರೂ ಒಂದೇ ಎಂದು ಬದುಕಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಬಹುದು, ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಅವಿರತ ಪರಿಶ್ರಮವನ್ನು ನಾವೆಂದೂ ಮರೆಯಬಾರದು ಎಂದು ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಪದವಿಪೂರ್ವ ವಿಭಾಗದ ಉಪಪ್ರಚಾರ್ಯ ಡಾ. ಪ್ರಕಾಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕಿ ಆ್ಯಲಿಸ್ ಲೋಬೋ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇಂಗ್ಲೀಷ್ ಶಿಕ್ಷಕಿ ದಿವ್ಯಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ದೇಶಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆ ಸ್ಮರಣೀಯ
ಭಾರತದಲ್ಲಿದ್ದ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ನಿವಾರಣೆ, ಸುವ್ಯವಸ್ಥಿತ ಕಾನೂನು ಜಾರಿ, ಸಮಾನತೆಗಾಗಿ ಅಂಬೇಡ್ಕರ್ ನೀಡಿದಂತಹ ಕೊಡುಗೆ ಎಂದಿಗೂ ಸ್ಮರಣೀಯ ಎಂದು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು. ಅವರು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಉಡುಪಿಯ ನೆಹರು ಯುವ ಕೇಂದ್ರದ ವತಿಯಿಂದ ಕುಂಟಲಗುಂಡಿಯ ರಂಗಮಂದಿರದಲ್ಲಿ ನಡೆದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಕ್ಲಬ್ನ ಸಂಚಾಲಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ದಿನೇಶ್ ಬೀರೊಟ್ಟು, ರಾಜೇಶ್ ಕೊಟ್ಯಾನ್, ಸತೀಶ್ ಅಬ್ಬನಡ್ಕ, ಉಪಾಧ್ಯಕ್ಷೆ ಲೀಲಾ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಮಂಡಳಿ ಅಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಪುಷ್ಪ ಕುಲಾಲ್, ಅಬ್ಬನಡ್ಕ ಭಜನಾ ಮಂಡಳಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಕೀರ್ತನ್ ಕುಮಾರ್, ಸದಸ್ಯರಾದ ಬಾಲಕೃಷ್ಣ ಮಡಿವಾಳ, ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ಹರೀಶ್ ಪೂಜಾರಿ, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಭಾರತೀಯ ಜನತಾ ಪಾರ್ಟಿ ವತಿಯಿಂದ ಅಂಬೇಡ್ಕರ್ ಜಯಂತಿ
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಕ್ಷದ ಕಚೇರಿಯಲ್ಲಿ ಎ. 14 ರಂದು ಅಂಬೇಡ್ಕರ್ ಜಯಂತಿ ಆಚರಣೆ ನಡೆಯಿತು. ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವೀಂದ್ರ ಮೊಯ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ, ಪಕ್ಷದ ಹಿರಿಯ ಮುಖಂಡ ಬೋಳ ಶ್ರೀನಿವಾಸ ಕಾಮತ್, ಮಂಡಲ ಕಾಯದರ್ಶಿಗಳಾದ ಪ್ರಕಾಶ್ ರಾವ್ ಮತ್ತು ಪ್ರಸನ್ನ ಕಾರ್ಲ, ಎಸ್.ಸಿ ಮೋರ್ಚಾದ ಉಸ್ತುವಾರಿ ಶ್ರೀನಿವಾಸ್ ಕಾರ್ಲ, ಅಧ್ಯಕ್ಷ ಅಣ್ಣಿ ಎಂ., ನಗರ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ಪುರಸಭೆ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ
ಉಡುಪಿ ಜಿಲ್ಲಾ ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನವನ್ನು ಸಲ್ಲಿಸುವುದರೊಂದಿಗೆ ಅವರ 132 ನೇ ಜನ್ಮ ದಿನವನ್ನು ಆಚರಿಸಲಾಯಿತು.
ಕ್ರಿಯೇಟಿವ್ ಕಾಲೇಜಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಕಾಲೇಜು ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಲಿಶನ್ ಗೌಡ, ಆಡಳಿತಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಉಪನ್ಯಾಸಕರಾದ ಸುಮಂತ ದಾಮ್ಲೆ, ಶಶಿರಾಜ್, ಅಕ್ಷತಾ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.




































