ಉಡುಪಿ : ಕುಖ್ಯಾತ ಅಂತರಾಜ್ಯ ಕಳ್ಳರ ಬಂಧನ

ಹೆಬ್ರಿ ಕೆರೆಬೆಟ್ಟುವಿನ ದಿಲೀಪ್ ಶೆಟ್ಟಿ ಸೇರಿದಂತೆ ಮೂವರು ಆರೋಪಿಗಳು ಪೊಲೀಸ್‌ ವಶಕ್ಕೆ

ಉಡುಪಿ : ಜು. 29 ರಂದು ಬ್ರಹ್ಮಾವರ ಠಾಣಾ ಸರಹದ್ದಿನ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಕಬ್ಬಿಣದ ರಾಡ್, ಬೆಳ್ಳಿಯ ಆಭರಣಗಳು ಪತ್ತೆಯಾಯಿತು.

ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಹಿಂದೆ ನಡೆಸಲಾದ 5 ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ ಪೈಕಿ ದಿಲೀಪ್ ಶೆಟ್ಟಿ ಹಾಗೂ ರಾಜನ್ ಅವರನ್ನು ವಿಚಾರಿಸಿದಾಗ ಬ್ರಹ್ಮಾವರ ಠಾಣಾ ಸರಹದ್ದಿನಲ್ಲಿ 2 ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ಮನೆ ಕಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ಮನೆ ಕಳ್ಳತನ ನಡೆಸಿದ್ದು, ಸ್ವತ್ತು, ಚಿನ್ನಾಭರಣ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 13 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 20,000 ರೂ ಮೌಲ್ಯದ 500 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್.ಪಿ. ವಿಷ್ಣುವರ್ಧನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಉಡುಪಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ ನಿರ್ದೇಶನದಂತೆ, ಬ್ರಹ್ಮಾವರ ಠಾಣಾ ಸಿ.ಪಿ.ಐ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಬಿ. ಹಾದಿಮನಿ, ತನಿಖಾ ಪಿ.ಎಸ್.ಐ ಮುಕ್ತಾಬಾಯಿ, ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಇ., ಬ್ರಹ್ಮಾವರ ಠಾಣಾ ಪ್ರೋಬೆಷನರಿ ಪಿ.ಎಸ್.ಐ. ಸುಬ್ರಮಣ್ಯ ದೇವಾಡಿಗ, ಬ್ರಹ್ಮಾವರ ಠಾಣಾ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮೊಹಮ್ಮದ್ ಅಜ್ಮಲ್, ರಾಘವೇಂದ್ರ ಕಾರ್ಕಡ, ಸಬಿತಾ, ಸುರೇಶ ಬಾಬು, ದಿಲೀಪ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಯವರಾದ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳು

ಇನ್ನು ಬಂಧಿತ ಆರೋಪಿಗಳ ಪೈಕಿ ರಾಜನ್ ತನ್ನ 19 ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್ -4 ಹಾಗೂ ಕೇರಳ ರಾಜ್ಯದ ತಿರುನೂರು-4, ಪಟ್ಟಂಬಿ-4, ತರೂರು-1, ತಮಿಳುನಾಡು ರಾಜ್ಯದ ನೀಲಗಿರಿ-3 ಹೀಗೆ ಒಟ್ಟು ಉಡುಪಿ ಜಿಲ್ಲೆ ಸೇರಿ ರಾಜನ್ ಮೇಲೆ 22 ಕೇಸು ದಾಖಲಾಗಿದ್ದು ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟು ಇರುತ್ತದೆ. ಹಾಗೂ ದಿಲೀಪ್ ಶೆಟ್ಟಿ, ಎಂಬಾತನು ಸ್ಯಾಂಟ್ರೋ ಕಾರು ಮತ್ತು ಓಮಿನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ಕಾರಿನಲ್ಲಿ ಕುಖ್ಯಾತ ಕಳ್ಳ ರಾಜನ್ ಕುಟ್ಟಿ ವಿಜಯನ್, ಸಜಿತ್ ವರ್ಗಿಸ್ ಇವರೊಂದಿಗೆ ಬಂದು ಹಾಸನ, ದ.ಕ ಮತ್ತು ಉಡುಪಿ ಭಾಗದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದನು.
ದಿಲೀಪ್ ಶೆಟ್ಟಿ ವಿರುದ್ಧ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್.ಎಂ.ಸಿ ಯಾರ್ಡ್, ನಂದಿನಿ ಲೇಹೌಟ್ ಮತ್ತು ಮಂಡ್ಯದ ನಾಗಮಂಗಲ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿ-ಟ್ಯಾಪ್ ಪ್ರಕರಣ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ಹಾಗೂ ಜಾಮೀನು ರಹಿತ ವಾರೆಂಟು ಇರುತ್ತದೆ ಎಂದು ತಿಳಿದು ಬಂದಿದೆ.





























































































































































































































error: Content is protected !!
Scroll to Top