ಶಬರಿಮಲೆ, ನ.4: ಯಾವ ಸಾಂಕ್ರಾಮಿಕ ರೋಗವೂ ದೇವರ ಮೇಲಿನ ಭಕ್ತಿಯನ್ನು ಒಂದಿಂಚೂ ಕಡಿಮೆಗೊಳಿಸದು ಎನ್ನುವುದಕ್ಕೆ ಶಬರಿಮಲೆಯೇ ಸಾಕ್ಷಿ. ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಮುಂಬರುವ ಮಂಡಲ ಮತ್ತು ಮಕರ ವಿಳಕ್ಕು ಯಾತ್ರೆಗೆ ವರ್ಚುವಲ್ ಕ್ಯೂ ಸಿಸ್ಟಮ್ (ಆನ್ ಲೈನ್ ಮೂಲಕ ಸರತಿ ಸಾಲು ಕಾದಿರಿಸುವುದು) ಮೂಲಕ ಮಾತ್ರ ಅವಕಾಶ ಕೊಡಲು ತೀರ್ಮಾನಿಸಲಾಗಿತ್ತು. ಆದರೆ ವರ್ಚುವಲ್ ಕ್ಯೂ ಸಿಸ್ಟಂ ಬುಕ್ಕಿಂಗ್ ಪ್ರಾರಂಭವಾದ ಎರಡೇ ದಿನಲ್ಲಿ ಭರ್ತಿಯಾಗಿದೆ. ಅರ್ಥಾತ್ ಇನ್ನು ಯಾರಿಗೂ ಈ ವರ್ಷ ಶಬರಿಮಲೆ ಯಾತ್ರೆಗೈಯ್ಯಲು ಅವಕಾಶ ಸಿಗುವ ಸಾಧ್ಯತೆಯಿಲ್ಲ.
ಭಾನುವಾರ ಆನ್ಲೈನ್ ಬುಕ್ಕಿಂಗ್ ಪ್ರಾರಂಭವಾಗಿತ್ತು. ಸೋಮವಾರ ಸಂಜೆಗಾಗುವಾಗ ಎಲ್ಲ ನಿಗದಿತ ಭೇಟಿ ಸಮಯಗಳು ಕಾದಿರಿಸಲ್ಪಟ್ಟು ಆಗಿತ್ತು. ವೆಬ್ಸೈಟಿನಲ್ಲಿ ಯಾವುದೇ ಅಡಚಣೆಯಿಲ್ಲದೆ ಬುಕ್ಕಿಂಗ್ ನಡೆದಿದೆ. ಕೇರಳ ಪೊಲೀಸ್ ಇಲಾಖೆ ವರ್ಚುವಲ್ ಕ್ಯೂ ಬುಕ್ಕಿಂಗ್ ಸಿಸ್ಟಂ ಅನ್ನು ನಿರ್ವಹಿಸುತ್ತಿದೆ.
ಈ ಸಲ ಕೊರೊನಾ ಕಾರಣದಿಂದ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಹೀಗಾಗಿ ವರ್ಚುವಲ್ ಕ್ಯೂ ಸಿಸ್ಟಂನಲ್ಲಿ ಮುಂಗಡವಾಗಿ ದರ್ಶನ ಕಾದಿರಿದರೆ ಮಾತ್ರ ಶಬರಿಮಲೆ ಯಾತ್ರೆಗೈಯ್ಯಲು ಅವಕಾಶ ಸಿಗುತ್ತದೆ.
ನ.15ರಂದು ಸಂಜೆ 5 ಗಂಟೆಗೆ ಮಂಡಲ ಪೂಜೆಗಾಗಿ ಶಬರಿಮಲೆ ಕ್ಷೇತ್ರವನ್ನು ತೆರೆಯಲಾಗುವುದು. ಅಂದೇ ಮೇಲ್ಶಾಂತಿಯ (ಮುಖ್ಯ ಅರ್ಚಕರು) ಅಧಿಕಾರ ಗ್ರಹಣ ವಿಧಿಯೂ ನೆರವೇರುತ್ತದೆ. ಮಂಡಲ ಪೂಜೆಯ ಅವಧಿ ಮುಗಿದ ಬಳಿಕ ಡಿ.26ರಂದು ದೇವಸ್ಥಾನವನ್ನು ಮುಚ್ಚಿ ಬಳಿಕ ಡಿ.30ರಂದು ಮಕರ ವಿಳಕ್ಕು ದರ್ಶನದ ಯಾತ್ರೆಗಾಗಿ ತೆರೆಯಲಾಗುವುದು. ಜ.14ರಂದು ಮಕರ ಬೆಳಕು ದರ್ಶನವಾಗಲಿದೆ. ಭಕ್ತರು ಜ.19ರ ತನಕ ಶಬರಿಮಲೆ ಯಾತ್ರೆ ಮಾಡಬಹುದು.
ನಿಯಮ ಬದಲಾವಣೆ ಸಾಧ್ಯತೆ
ವಾರದ ದಿನಗಳಲ್ಲಿ ಗರಿಷ್ಠ 1,000 ಹಾಗೂ ಶನಿವಾರ ಮತ್ತು ಭಾನುವಾರ ಗರಿಷ್ಠ 2,000 ಭಕ್ತರಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕೊಡಬೇಕೆಂಬ ನಿಯಮ ರಚನೆ ಮಾಡಲಾಗಿತ್ತು. ಆದರೆ ಕೇರಳ ಹೈಕೋರ್ಟ್ ಈ ನಿಯಮದಲ್ಲಿ ಮಾರ್ಪಾಡು ಸಾಧ್ಯವೇ ಎಂದು ಸರಕಾರವನ್ನು ಕೇಳಿದೆ. ಹೀಗಾಗಿ ಹೆಚ್ಚು ಭಕ್ತರಿಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ. ಆದರೆ ಇದು ಕೇರಳದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಹೊಂದಿಕೊಂಡಿದೆ. ಕೊರೊನದ ಎರಡನೇ ಅಲೆ ಕೇರಳಕ್ಕೆ ಅಪ್ಪಳಿಸಿಯಾಗಿದೆ. ಈಗಲೂ ಅಲ್ಲಿ ನಿತ್ಯ 7 ರಿಂದ 8 ಸಾವಿರ ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ.
