ಕಾರ್ಕಳ, ನ. 2 : ಜಯ ಸುವರ್ಣ ಒಬ್ಬ ವ್ಯಕ್ತಿಯಾಗಿರಲಿಲ್ಲ, ಶಕ್ತಿಯಾಗಿದ್ದರು. ಅವರ ಆ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತದಡಿಯಲ್ಲಿ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ಬಿಲ್ಲವ ಜನಾಂಗದ ಸಮಗ್ರ ಅಭಿವೃದ್ಧಿಯನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು. ಅವರ ನಿಧನದಿಂದ ಸಮಾಜ ಬಡವಾಗಿದೆ ಎಂದು ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜು ಹೇಳಿದ್ದಾರೆ.
ಅವರು ಇಲ್ಲಿನ ನಾರಾಯಣ ಗುರು ಸಭಾ ಭವನದಲ್ಲಿ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ ಬ್ಯಾಂಕಿನ ಸಂಸ್ಥಾಪಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ.ಸುವರ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಿಶ್ರಾಂತ ಪತ್ರಕರ್ತ, ಚಿಂತಕ ಬಿಪಿನಚಂದ್ರ ಪಾಲ್ ನಕ್ರೆ ಮಾತಾಡಿ ದಿ. ಜಯ ಸುವರ್ಣ ಒಂದು ಜನಾಂಗದ ನಾಯಕನಾಗಿರದೆ ಸರ್ವಜನಾಂಗದ ನಾಯಕನಾಗಿದ್ದು ,ವಿದ್ಯೆ ಮತ್ತು ಉದ್ಯೋಗದಿಂದ ಮಾತ್ರ ಒಂದು ಸಮಾಜ ಅಭಿವೃದ್ದಿಯನ್ನು ಹೊಂದಲು ಸಾಧ್ಯ ಎಂದು ಬಲವಾಗಿ ನಂಬಿದ್ದರು ಎಂದು ಹೇಳಿದರು.
ಸುಶಾಂತ್ ಸುಧಾಕರ್ ಮಾತಾಡಿ ದಿ. ಜಯ ಸುವರ್ಣರವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ಥಿ ಪಡೆದ ದಿನದಂದೇ ಅವರ ಪುಣ್ಯ ಸ್ಮರಣೆ ಮಾಡುತ್ತಿದ್ದೇವೆ. ಬದುಕಿನಲ್ಲಿ ಅವರು ಅಳವಡಿಸಿಕೊಂಡ ಆದರ್ಶದ ದಾರಿಯಲ್ಲಿ ನಾವೂ ನಡೆದು ಅವರ ಋಣ ತೀರಿಸೋಣ ಎಂದರು.
ಮಾಜಿ ಅಧ್ಯಕ್ಷ ಕೆ.ಗೋಪಾಲ, ಯುವ ವಿಭಾಗದ ಅಧ್ಯಕ್ಷ ಸಂದೇಶ್ ಕೋಟ್ಯಾನ್, ಪ್ರದೀಪ ಎನ್. ಆರ್., ಸಂತೋಷ ಬಂಗೇರ, ವಿಠಲ ಪೂಜಾರಿ, ವಿಶಾಲಾಕ್ಷಿ, ಜಯಂತಿ ಬಂಗೇರಾ, ಶಾಂತಾ ಕಲ್ಯಾ, ಸುರೇಂದ್ರ ಮೈಪಾಲ್, ಲಕ್ಷ್ಮಣ ಕಾರ್ಕಳ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಭಾಕರ ಬಂಗೇರ ಅವರು ದಿ. ಜಯ ಸಿ. ಸುವರ್ಣ ಅವರ ಸಮಗ್ರ ಸಾಧನೆಯ ವಿವರವನ್ನು ನೀಡಿ ನುಡಿನಮನ ಸಲ್ಲಿಸಿ, ಸ್ವಾಗತಿಸಿದರು. ಪ್ರವೀಣ ಸುವರ್ಣ ಪ್ರಸ್ಥಾವನೆ ಗೈದರು. ಸುಜಯ ವಂದಿಸಿದರು.
