ಮಂಗಳೂರು, ನ.1: ಕನ್ನಡ ರಾಜ್ಯೋತ್ಸವ ದಿನದಂದೇ ಪ್ರತ್ಯೇಕ ತುಳುನಾಡು ಆಗಬೇಕೆಂಬ ಬೇಡಿಕೆಗೆ ಸಂಬಂಧಪಟ್ಟಿರುವ ಸ್ಫೋಟಕ ಆಡಿಯೋ ತುಣುಕೊಂದು ಬಹಿರಂಗಗೊಂಡು ಸಂಚಲನ ಸೃಷ್ಟಿಸಿದೆ.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ನೀಡಿದ್ದರೆನ್ನಲಾಗಿರುವ ಪ್ರಚೋದನಾತ್ಮಕ ಹೇಳಿಕೆ ಈ ಆಡಿಯೊ ಕ್ಲಿಪ್ಪಿಂಗ್ನಲ್ಲಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್ ಗಳಿಗೆ ಬೆಂಕಿ ಹಚ್ಚಬೇಕು. ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಸೇರಿದಂತೆ ರಾಜಕೀಯ ನಾಯಕರಿಗೆಲ್ಲ ಹಿಗ್ಗಾಮುಗ್ಗಾ ಬೈಯ್ಯಬೇಕು ಎಂದು ಹೇಳುತ್ತಿರುವುದು ವೈರಲ್ ಆದ ಆಡಿಯೋದಲ್ಲಿ ಕೇಳಿಸುತ್ತಿದೆ. ತುಳುವಿನಲ್ಲಿರುವ ಈ ಮಾತುಕತೆಯಲ್ಲಿ, ರಾಜ್ಯದ ಮೂಲೆಮೂಲೆಯಲ್ಲೂ ತುಳು ರಾಜ್ಯಕ್ಕಾಗಿ ಹೋರಾಟ ಆಗಬೇಕು. ಆಗ ಅಕಾಡಮಿಯವರಾದ ನಮ್ಮನ್ನು ಸಂಧಾನಕ್ಕೆ ಕರೆದು ಸರಕಾರದವರು ಮಾತನಾಡುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ. ತುಳು ರಾಜ್ಯ ಘೋಷಣೆ ಮಾಡಿದರಷ್ಟೇ ಸಮಾಧಾನ ಆಗುತ್ತಾರೆ ಎಂದು ಹೇಳಿರುವ ಮಾತು ಇದೆ.
ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್ ಉಳ್ಳಾಲ್ ಎಂಬವರು ಈ ಆಡಿಯೊ ಕ್ಲಿಪ್ಪಿಂಗ್ ಅನ್ನು ಬಹಿರಂಗಗೊಳಿಸಿದ್ದಾರೆ . ನಾನೇ ಬಹಿರಂಗಗೊಳಿಸಿದ್ದು ಎಂಬುದಾಗಿ ಉಳ್ಳಾಲ್ ಒಪ್ಪಿಕೊಂಡಿದ್ದಾರೆ.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹುದ್ದೆಯಂಥ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹಿಂಸಾಚಾರವನ್ನು ಸೃಷ್ಟಿಸುವ ಕುರಿತು ಮಾತನಾಡಿದ್ದು ಆಘಾತ ನೀಡಿತು. ಇದೇ ಕಾರಣಕ್ಕೆ ಆಡಿಯೊ ಬಹಿರಂಗಗೊಳಿಸಿದ್ದೇನೆ ಎಂದು ಉಳ್ಳಾಲ್ ಹೇಳಿಕೊಂಡಿದ್ದಾರೆ.
ತುಳು ಲಿಪಿ ವಿಚಾರವಾಗಿ ದಯಾನಂದ ಕತ್ತಲ್ಸಾರ್ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದೆ. ಈ ವೇಳೆ ಮಾಹಿತಿಗಾಗಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಈ ಸಂದರ್ಭದಲ್ಲಿ ಆವರು ಪ್ರತ್ಯೇಕ ತುಳು ರಾಜ್ಯಕ್ಕಾಗಿ ತುಳುನಾಡು ಟ್ರಸ್ಟ್ ಮೂಲಕ ಹಿಂಸೆಗೆ ಇಳಿಯುವಂತೆ ಪ್ರಚೋದನಕಾರಿ ಮಾತುಗಳನ್ನು ಆಡಿದರು. ಇಂತಹ ಹೇಳಿಕೆಗಳಿಂದ ಭವಿಷ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಅದು ತುಳುನಾಡು ಟ್ರಸ್ಟ್ ಹೆಸರಿಗೆ ಬಂದರೆ ಯಾರು ಹೊಣೆ ಎಂಬ ಕಾರಣಕ್ಕೆ ಈ ಆಡಿಯೋ ವೈರಲ್ ಮಾಡಿದೆವು. ಅದಲ್ಲದೆ ಈ ಹೇಳಿಕೆ ಕುರಿತಂತೆ ಸಂಸದರು, ಸಂಬಂಧಪಟ್ಟ ಶಾಸಕರಿಗೂ ಮಾಹಿತಿ ನೀಡಿದ್ದೇವೆ ಎಂದು ಉಳ್ಳಾಲ್ ಹೇಳಿದ್ದಾರೆ.
ಆದರೆ ದಯಾನಂದ ಕತ್ತಲ್ಸಾರ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ ನನ್ನ ಮಾತುಗಳನ್ನು ಉದ್ದೇಶಪೂರ್ವಕವಾಗಿ ರೆಕಾರ್ಡ್ ಮಾಡಿ, ಅದನ್ನು ತಿರುಚಿ ವೈರಲ್ ಮಾಡಲಾಗಿದೆ.ಉಳ್ಳಾಲ್ ನನ್ನನ್ನು ಭೇಟಿಯಾಗಿದ್ದು, ಮಾತನಾಡಿದ್ದೆಲ್ಲ ನಿಜ. ಆದರೆ ನಾನು ಹಿಂಸಾಚಾರ ನಡೆಸುವ ಬಗ್ಗೆ ಮಾತನಾಡಿಲ್ಲ. ತೆಲಂಗಾಣ ರಾಜ್ಯ ರಚನೆ ಮಾದರಿಯ ಹಿಂಸಾಚಾರ ಸಲ್ಲದು ಎಂದು ಹೇಳಿದ್ದೆ. ಅದೇ ಆಡಿಯೊವನ್ನು ಎಡಿಟ್ ಮಾಡಿ ನನ್ನ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನ ಮಾಡಿದ್ದಾರೆ ಎಂದು ಕತ್ತಲ್ಸಾರ್ ಸ್ಪಷ್ಟೀಕರಣ ನೀಡಿದ್ದಾರೆ.
