ಮುಂಬಯಿ, ಅ.18: ಮುಂಬಯಿಯ ಹಿರಿಯ ರಂಗ ನಟ , ಲೇಖಕ , ನಿರ್ದೇಶಕ , ಕಲಾಸಂಘಟಕ , ಕನ್ನಡ ಕಲಾಕೇಂದ್ರ ಮುಂಬಯಿ ಇದರ ಅಧ್ಯಕ್ಷ ಹಾಗೂ ನವಿ ಮುಂಬೈ ಕನ್ನಡ ಸಂಘ ದ ಕಾರ್ಯಾಧ್ಕ್ಷರಾಗಿದ್ದ ಬೈಲೂರು ಬಾಲಚಂದ್ರರಾವ್ (75) ಅ. 18ರಂದು ನಿಧನರಾದರು.
ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಜನಿಸಿದ ಇವರು ಮಂಗಳೂರಿನ ಪೊಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್, ಮುಂಬೈಯ ಸಿದ್ದಾರ್ಥ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಬಿಸಿನೆಸ್ ಮೆನೇಜ್ಮೆಂಟ್ ಹಾಗೂ ಎಎಂಎಸ್ಎಂಐ ಪದವಿ ಪಡೆದುಕೊಂಡರು.
ಮುಂಬೈಯಲ್ಲಿ ನೇವಲ್ ಡಾಕ್ ಯಾರ್ಡ್ ಇಂಡಿಯನ್ ನೇವಿಯಲ್ಲಿ 36ವರ್ಷ ಸೇವೆಗೈದು 2005ರಲ್ಲಿ ನಿವೃತ್ತರಾಗಿದ್ದರು.

ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಬಿಎಸ್ ಕೆಬಿ ಎಸೋಸಿಯೇಷನ್, ಕನ್ನಡ ಕಲಾಕೇಂದ್ರ, ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ, ಮಹಾರಾಷ್ಟ್ರ ಕನ್ನಡಿಗರ ಕಲಾವಿದರ ಪರಿಷತ್ತು, ಮಹಾರಾಷ್ಟ್ರ ಚುಟುಕು ಸಾಹಿತ್ಯ ಪರಿಷತ್ತು, ನವಿ ಮುಂಬೈ ಕನ್ನಡ ಸಂಘ ವಾಶಿ ಮೊದಲಾದ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕನ್ನಡ ಸೇವೆಗೈದವರು. ಹಲವು ವರ್ಷ ಗೋಕುಲವಾಣಿಯ ಸಂಪಾದಕರಾಗಿದ್ದರು.
ಬೈಬಾರ ಹೆಸರಿನಲ್ಲಿ ಅನೇಕ ಲೇಖನಗಳನ್ನು ಬರೆದಿರುತ್ತಾರೆ. 9 ನಾಟಕಗಳನ್ನು ಬರೆದಿದ್ದು 5 ನಾಟಕಗಳು ಪ್ರಕಟಗೊಂಡಿವೆ. ಕನಕದಾಸರು ನಾಟಕ ಐನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ. ಇತ್ತೀಚಿನ ದಿನಗಳಲ್ಲಿ ಆದಿಶಂಕರಾಚಾರ್ಯ ಪ್ರಸಿದ್ಧಿ ಪಡೆದಿತ್ತು. ಎಂಟನೇ ವಯಸ್ಸಿನಿಂದಲೇ ರಂಗಭೂಮಿಯ ನಟನಾಗಿ ಗುರುತಿಸಿಕೊಂಡಿದ್ದರು. ಅನೇಕ ನಾಟಕಗಳ ನಿರ್ದೇಶಕರಾಗಿದ್ದರು.ಕಳೆದ ವರ್ಷ 2019ರಲ್ಲಿ ಅಭಿಜಿತ್ ಪ್ರಕಾಶನದಲ್ಲಿ ‘ರಂಗಾಮೃತ’ ಎನ್ನುವ ಅವರ ಅಭಿನಂದನಾ ಗ್ರಂಥಪ್ರಕಟವಾಗಿತ್ತು.












