ಕಾರ್ಕಳ, ಸೆ. 26: “ನನಗಲ್ಲ ನಿನಗೆ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮುದಾಯ ಸೇವೆಯತ್ತ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ಸೇವಾ ಯೋಜನೆಯಡಿ ಬರುವ ಪ್ರತಿಯೊಬ್ಬ ಸ್ವಯಂ ಸೇವಕನೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇತರರ ಹಿತಕ್ಕಾಗಿಯೇ ಕಾರ್ಯೋನ್ಮುಖನಾಗಬೇಕು. ಈ ವ್ಯವಸ್ಥೆಯಲ್ಲಿ ಸಕ್ರಿಯರಾದ ಪ್ರತಿಯೊಬ್ಬರಲ್ಲೂ ಶಿಸ್ತಿನ ಜೀವನ, ಸಹಬಾಳ್ವೆ, ಶ್ರಮದ ಮಹತ್ವ, ವ್ಯಕ್ತಿತ್ವ ವಿಕಸನ ಮುಂತಾದ ಧನಾತ್ಮಕ ಮೌಲ್ಯಗಳು ಮೈಗೂಡುವುದಲ್ಲದೆ ರಾಷ್ಟ್ರೀಯ ಭಾವೈಕ್ಯತೆಯ ಭಾವ ತನ್ನಷ್ಟಕ್ಕೇ ಮೂಡುತ್ತದೆ ಎಂದು ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೇ ಕಾಲೇಜು ಕಾರ್ಕಳ, ಇಲ್ಲಿಯ ಕಾಮರ್ಸ್ & ಮ್ಯಾನೇಜ್ ಮೆಂಟ್ ವಿಭಾಗದ ಮುಖ್ಯಸ್ಥರಾದ ಜ್ಯೋತಿ ಎಲ್. ಜನ್ನೆ ಹೇಳಿದರು.
ಅವರು ಸೆ. 24ರಂದು ‘ರಾಷ್ಟ್ರೀಯ ಸೇವಾ ದಿನಾಚರಣೆ’ ಅಂಗವಾಗಿ ನಡೆದ ಆನ್ಲೈನ್ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲಪ್ರೊ.ಶ್ರೀವರ್ಮ ಅಜ್ರಿ ಎಂ. ಅವರು ಮಾತನಾಡುತ್ತಾ “ವಿದ್ಯಾರ್ಥಿಯೊಬ್ಬ ತನ್ನ ಒಟ್ಟು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ, ಅಂಕಗಳ ಜೊತೆಗೆ ಕೆಲವು ಕೌಶಲ್ಯಗಳನ್ನು ವರ್ಧಿಸಿಕೊಳ್ಳುವ ಅನಿವಾರ್ಯತೆ ಇದೆ. ಎನ್.ಎಸ್.ಎಸ್.ನಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಯೊಬ್ಬ ಬದುಕಿಗೆ ಪೂರಕವಾದ ಇಂತಹ ಕೌಶಲ್ಯಗಳನ್ನು ಸುಲಭವಾಗಿ ಅಂತರ್ಗತ ಮಾಡಿಕೊಳ್ಳಬಲ್ಲ ಎಂದು ಸ್ವಯಂ ಸೇವಕರಿಗೆ ಕಿವಿಮಾತು ಹೇಳಿದರು.ಕಾಲೇಜಿನ ರಾ.ಸೇ.ಯೋಜನಾಧಿಕಾರಿ ನವೀನ್ ಧನ್ಯವಾದ ಸಮರ್ಪಿಸಿದರು, ಇನ್ನೋರ್ವ ಯೋಜನಾಧಿಕಾರಿ ಜ್ಯೋತಿ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರೂಪಿಸಿದರು.



































