ಇಂದಿನ ಐಕಾನ್ – ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್

ಎಲ್ಲಾ ಓದುಗರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಎಲ್ಲರಿಗೂ ಪ್ರೇರಣೆ ನೀಡುವ ಒಂದು ಸುಂದರವಾದ ಸಂಚಿಕೆ ಇಂದು ನಿಮ್ಮ ಮುಂದಿದೆ.

ಆಕೆ ಚಿತ್ತೂರಿನ ರಜಪೂತ ಮಹಾ ರಾಣಿ ಕರ್ಣಾವತಿ ( ಕರ್ಮಾವತಿ ಎಂಬ ಉಲ್ಲೇಖ ಕೂಡ ಇದೆ). 15ನೇ  ಶತಮಾನದಲ್ಲಿ ಮೇವಾಡವು ಚಿತ್ತೂರು ರಾಜ್ಯದ ರಾಜಧಾನಿ ಆಗಿತ್ತು. ರಾಣಾ ಸಂಗನು  ಚಿತ್ತೂರಿನ ರಜಪೂತ  ಅರಸನಾಗಿದ್ದನು. ಆತನ ಪತ್ನಿ ಕರ್ಣಾವತಿ. ರಜಪೂತರು ಮಹಾನ್ ರಾಷ್ಟ್ರಪ್ರೇಮಿಗಳು ಮತ್ತು ಸ್ವಾಭಿಮಾನಿಗಳು.

1526ರಲ್ಲಿ  ದೆಹಲಿಯಲ್ಲಿ ಮೊಗಲ್ ದೊರೆ ಬಾಬರನ ಆಳ್ವಿಕೆಯು ಆರಂಭವಾಯಿತು. ಆತ ತನ್ನ ಸಾಮ್ರಾಜ್ಯವನ್ನು  ವಿಸ್ತಾರ ಮಾಡುತ್ತಾ  ರಜಪೂತರ  ರಾಜ್ಯವನ್ನು ಕಬಳಿಸಲು ಪ್ರಯತ್ನ ಮಾಡಿದನು. ಆಗ ಎಲ್ಲಾ ರಜಪೂತರು ರಾಣಾ ಸಂಗನ ನೇತೃತ್ವದಲ್ಲಿ ಒಟ್ಟು ಸೇರಿ ಮೊಗಲರನ್ನು ಎದುರಿಸಿದರು. ಆದರೆ ಭೀಕರವಾದ ಯುದ್ಧದಲ್ಲಿ ಬಾಬರನ ಕೈ ಮೇಲಾಯಿತು. ರಾಣಾ ಸಂಗನು ಗಾಯಗೊಂಡು ಮರಣ ಹೊಂದಿದನು. ಚಿತ್ತೂರು ಅನಾಥವಾಯಿತು. ರಾಣಿ ವಿಧವೆ ಆದಳು.

ಆದರೆ ಆಕೆ ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ಳುವ ಮಹಿಳೆ ಆಗಿರಲಿಲ್ಲ. ತನ್ನ ಇಬ್ಬರು ಮಕ್ಕಳಾದ ವಿಕ್ರಮಜಿತ ಮತ್ತು ಉದಯ ಸಿಂಗ್ ಅವರ ರಕ್ಷಣೆಯ ಭಾರವೂ ಆಕೆಯ ಮೇಲಿತ್ತು. ಆಕೆ ತನ್ನ ದೊಡ್ಡ ಮಗ ವಿಕ್ರಮಜಿತನನ್ನು  ರಾಜನಾಗಿ ಘೋಷಿಸಿ ತಾನೇ ರಾಜ್ಯಭಾರವನ್ನು ನಡೆಸಲು  ತೊಡಗಿದಳು. ತನ್ನ ಪ್ರಜೆಗಳಿಗೆ ಧೈರ್ಯ ತುಂಬುವ ಎಲ್ಲ ಪ್ರಯತ್ನಗಳನ್ನೂ ಮಾಡಿದಳು.

ಆಗ ಪರಿಸ್ಥಿತಿಯ ಲಾಭ ಪಡೆಯುವ ದೃಷ್ಟಿಯಿಂದ ಗುಜರಾತಿನ ಬಹದ್ದೂರ್ ಷಾ ಎಂಬ ಶಕ್ತಿಶಾಲಿ ಅರಸನು ಚಿತ್ತೂರಿನ ಮೇಲೆ ದಾಳಿ ಮಾಡಿದನು. ರಾಣಿಯ ಸೈನ್ಯ ಆಗಲೇ ಗಾಯಗೊಂಡು ಕಷ್ಟ ಪಡುತ್ತಿತ್ತು. ಮಕ್ಕಳು ಸಣ್ಣವರು.  ಆದರೆ ರಾಣಿ ತನ್ನ ಸೈನಿಕರಿಗೆ

“ನಾವು ಹೋರಾಡೋಣ. ನೀವು ನನ್ನ ಬಗ್ಗೆ ಚಿಂತೆಯನ್ನು ಮಾಡುವುದು ಬೇಡ. ನಮ್ಮ  ಚಿತ್ತೂರಿಗಾಗಿ  ಹೋರಾಟ  ಮಾಡಿ” ಎಂದು ಕರೆಕೊಟ್ಟಳು.

ಆಕೆ ಪನ್ನಾ ಎಂಬ ತನ್ನ ದಾಸಿಯ ಸಹಾಯ ಪಡೆದು ತನ್ನ ಇಬ್ಬರೂ ಮಕ್ಕಳನ್ನು ತನ್ನ ತವರುಮನೆಗೆ ಕಳುಹಿಸಿದಳು. ತನ್ನ ಸೈನ್ಯಕ್ಕೆ ಧೈರ್ಯ ತುಂಬಿಸಿ ಕತ್ತಿ ಝಳಪಿಸುತ್ತಾ ಯುದ್ಧಕ್ಕೆ ಇಳಿದೇ ಬಿಟ್ಟಳು. ಆದರೆ ಬಹದ್ದೂರ್ ಷಾನ ದೊಡ್ಡ  ಸೈನ್ಯದ ಮುಂದೆ ರಜಪೂತರ  ಸೈನ್ಯ ಸೋಲುವ ಹಂತಕ್ಕೆ ಬಂದಿತು. ಆತನ ಸೇನೆ ಚಿತ್ತೂರಿನ ಕೋಟೆಯನ್ನು  ಪ್ರವೇಶ ಮಾಡಿತು.

ಆಗ ರಕ್ಷಾ ಬಂಧನದ ಪರ್ವ ಕಾಲ. ತನ್ನ ರಾಜ್ಯವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ರಾಣಿ ಮೊಗಲ್ ದೊರೆಯಾದ ಹುಮಾಯೂನನ ನೆನಪು ಮಾಡಿಕೊಂಡಳು.  ಆತನಿಗೆ ಒಂದು ಪತ್ರವನ್ನು ಬರೆದು ಅದರ ಜೊತೆಗೆ ರಕ್ಷಾ ಬಂಧನವನ್ನು ಕಳುಹಿಸಿದಳು.

“ಅಣ್ಣಾ, ಕಷ್ಟದಲ್ಲಿ ಇದ್ದೇನೆ.  ಸಹಾಯ ಮಾಡು.” ಎಂದು ಎರಡೇ ಸಾಲು ಬರೆದು ದೆಹಲಿಗೆ ದೂತರ ಮೂಲಕ ಕಳುಹಿಸಿ ಕೊಟ್ಟಳು.

ಆ ಪತ್ರ ಓದಿದ ಕೂಡಲೇ ಮೊಗಲ್ ದೊರೆ  ಹುಮಾಯೂನನ  ಮನಸ್ಸು ಕರಗಿಹೋಯಿತು. ಅಣ್ಣಾ ಎಂಬ ಶಬ್ದವೇ ಅವನನ್ನು ಗಾಢವಾಗಿ ತಟ್ಟಿತು. ಆತ ಕೂಡಲೇ ತನ್ನ ದೊಡ್ಡದಾದ ಸೇನೆಯನ್ನು ಸಜ್ಜುಗೊಳಿಸಿ ಚಿತ್ತೂರಿನ ಕಡೆಗೆ ಹೊರಟನು. ಆನೆ, ಕುದುರೆ, ರಥಗಳು ಸೇರಿದ ಸೈನ್ಯವು ಚಿತ್ತೂರಿನ ಕಡೆಗೆ ಹೊರಟಿತು. ಆದರೆ ಆತ ಚಿತ್ತೂರು  ತಲುಪುವಾಗ ದುರಂತ ನಡೆದು ಹೋಗಿತ್ತು!

ರಾಣಿಯ ಕೋಟೆಯನ್ನು ಬಹದ್ದೂರ್ ಷಾ ಸೂರೆ ಮಾಡಿ ಆಗಿತ್ತು. ಅರಮನೆ ಕೂಡ ಆತನ ವಶ ಆಗಿತ್ತು. ರಾಣಿ ಕರ್ಣಾವತಿ ತನ್ನ ಇತರ ರಾಣಿಯರ ಜೊತೆಗೆ ಜೋಹಾರ್ ಪದ್ಧತಿಯನ್ನು ಅನುಸರಿಸಿ ಚಿತೆಯನ್ನು ಏರಿ ಆಗಿತ್ತು! ಧಗಧಗಿಸುವ ಚಿತೆಯ ಮುಂದೆ  ಹುಮಾಯೂನನು ಕಣ್ಣೀರು ಸುರಿಸುತ್ತ ನಿಂತನು.  ತನ್ನ ಅಣ್ಣನ ಕರ್ತವ್ಯದ ಭಾಗವಾಗಿ ಬಹದ್ದೂರ್ ಷಾನ  ಜೊತೆಗೆ ಯುದ್ಧ ಮಾಡಿ ಅವನನ್ನು ಸೋಲಿಸುತ್ತಾನೆ. ಆ ರಾಜ್ಯವನ್ನು ರಾಣಿಯ ಹಿರಿಯ ಮಗನಾದ ವಿಕ್ರಮಜಿತನಿಗೆ ಒಪ್ಪಿಸಿ ಮತ್ತೆ ದೆಹಲಿಗೆ ಹಿಂದಿರುಗುತ್ತಾನೆ.

ಹುಮಾಯೂನ್ ರಾಣಿಯ ರಕ್ಷಾ ಬಂಧನದ ಗೌರವವನ್ನು ಎತ್ತಿ ಹಿಡಿದು ಇತಿಹಾಸದಲ್ಲಿ ಬಹುದೊಡ್ಡ ಸ್ಥಾನ ಪಡೆದನು.

( ಇತಿಹಾಸದ ಘಟನೆ ಆಧಾರಿತ ಅಮರ ಚಿತ್ರಕಥಾ ಪುಸ್ತಕದ ಕಥೆ)

ರಾಜೇಂದ್ರ ಭಟ್ ಕೆ.





























































error: Content is protected !!
Scroll to Top