ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗೆ ನೀರೆ ಕೃಷ್ಣ ಶೆಟ್ಟಿ ಪತ್ರ

ಹೆಬ್ರಿ : ಕಳೆದ ಹಲವಾರು ವರ್ಷಗಳಿಂದ ಯಾವುದೇ ಬೃಹತ್‌ ಯೋಜನೆಗಳು ಉಡುಪಿ ಜಿಲ್ಲೆಗೆ ದೊರೆಯದೇ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಜಿಲ್ಲೆಯ ಜನರು ಮಹತ್ವದ ಗ್ಯಾರಂಟಿ ಯೋಜನೆ ಜೊತೆಗೆ ಹೊರ ರಾಜ್ಯ, ಹೊರದೇಶದಲ್ಲಿ ದುಡಿದು ತಂದ ಆದಾಯದಿಂದ ತಲಾ ವರಮಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಈ ಸಲದ ರಾಜ್ಯದ ಬಜೆಟ್‌ ನಲ್ಲಿ ಉಡುಪಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಜನೋಪಯೋಗಿಯಾದ ಬೃಹತ್‌ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಪತ್ರದ ಮೂಲಕ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಯು ಶಿಕ್ಷಣ, ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್‌, ಹೊಟೇಲ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಆದರೆ ಅಂದು ಶ್ರೀನಿವಾಸ ಮಲ್ಯರು ರೂಪಿಸಿದ ಮಹತ್ವದ ಯೋಜನೆಗಳು ಇನ್ನೂ ಕಾರ್ಯಗತವಾಗಿಲ್ಲ ಎಂದು ತಿಳಿಸಿದ ಅವರು ಉಡುಪಿ ಜಿಲ್ಲೆಯ ಆದ್ಯತೆಯ ಬೇಡಿಕೆ ಕುರಿತು ಸಿಎಂ ಅವರಿಗೆ ಬರೆದ ಪತ್ರದಲ್ಲಿ ಪಟ್ಟಿ ಮಾಡಿರುತ್ತಾರೆ. ಕುಂದಾಪುರಕ್ಕೆ ಸರಕಾರಿ ವೈದ್ಯಕೀಯ ಕಾಲೇಜು, ಬ್ರಹ್ಮಾವರಕ್ಕೆ ಕೃಷಿ ವಿಶ್ವವಿದ್ಯಾಲಯ, ಪಡುಬಿದ್ರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆಗುಂಬೆ ಘಾಟಿಯನ್ನು ವಿಸ್ತರಿಸಿ ಘನವಾಹನ ಸಂಚಾರಕ್ಕೆ ಮುಕ್ತಗೊಳಿಸುವುದು, ಮಂಗಳೂರಿನಿಂದ ಬೈಂದೂರಿಗೆ ಮೆಟ್ರೋ ರೈಲು ಯೋಜನೆ, ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ, ಉಡುಪಿ ಜಿಲ್ಲೆಯ ಅರಣ್ಯ, ಡೀಮ್ಡ್‌ ಫಾರೆಸ್ಟ್‌, ಕುಮ್ಕಿ ಮತ್ತು ಕಂದಾಯ ಭೂಮಿಯನ್ನು ಜಂಟಿ ಸರ್ವೆ ನಡೆಸುವಂತೆ ಹೀಗೆ ಜನಪರವಾದ ಯೋಜನೆಗಳನ್ನು ಬಜೆಟ್‌ ನಲ್ಲಿ ಘೋಷಿಸಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.





















error: Content is protected !!
Scroll to Top