ಕಾರ್ಕಳ : ವಚನಗಳ ಮೂಲಕ ಬದುಕಿನ ಹಾಗೂ ಸಾಮಾಜಿಕ ವಿಚಾರಗಳನ್ನು ತಿಳಿಸುವುದರೊಂದಿಗೆ ಸಮಾಜ ಸುಧಾರಣೆಗೆ ಮಾರ್ಗದರ್ಶನ ನೀಡಿದ ತ್ರಿಪದಿ ಬ್ರಹ್ಮ ಸರ್ವಜ್ಞನ ಬದುಕು ಆದರ್ಶಪ್ರಾಯ ಎಂದು ತಹಶೀಲ್ದಾರ್ ಪ್ರದೀಪ್ ಆರ್. ಅಭಿಪ್ರಾಯಪಟ್ಟರು.
ಅವರು ಫೆ. 19ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇದರ ಆಶ್ರಯದಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಂಗವಾಗಿ ಉಪನ್ಯಾಸ ನೀಡಿದ ಕು. ಮನಸ್ವಿ ಕುಲಾಲ್, ಸಂಕಷ್ಟ ಹಾಗೂ ದೌರ್ಜನ್ಯಗಳಲ್ಲಿ ಮಿಂದೆದ್ದವರಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಓರ್ವರು ಸರ್ವಜ್ಞ. ಅವರು ಸಮಾಜದಲ್ಲಿ ಮಾಡಿದ ಕ್ರಾಂತಿ ಎಲ್ಲರಿಗೂ ಆದರ್ಶ ಪ್ರಾಯವಾದುದು ಎಂದರು.
ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್ ಮಾತನಾಡಿ, ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆಯನ್ನು ತೊಡೆದು ಹಾಕುವಲ್ಲಿ ಕವಿ ಸರ್ವಜ್ಞರ ಪಾತ್ರ ಮಹತ್ತರವಾದುದು ಎಂದರು.
ಕಾರ್ಯಕ್ರಮದಲ್ಲಿ ಕುಲಾಲ ಸಮುದಾಯದ ಪ್ರಮುಖರು, ವಿವಿಧ ಇಲಾಖಾಧಿಕಾರಿಗಳು ಭಾಗಿಯಾಗಿದ್ದರು. ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರ್ವಹಿಸಿದರು.




































