ಸಿದ್ದರಾಮಯ್ಯಗೆ ಸುನಿಲ್ ಕುಮಾರ್ ಪ್ರಶ್ನೆ
ಕಾರ್ಕಳ: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮದೋನ್ಮತ್ತರು ಕಾನೂನು ಭಯವಿಲ್ಲದೆ ಕೊಲೆ, ದೊಂಬಿ, ನೈತಿಕ ಪೊಲೀಸ್ಗಿರಿ, ದೇಶ ವಿರೋಧಿ ಘೋಷಣೆ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಬೇಕೆಂಬ ಸಾರ್ವಜನಿಕ ಆಗ್ರಹ ನಡೆಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಹುಬ್ಬಳಿಯಲ್ಲಿ ನಡೆದ ಈ ಬರ್ಬರ ಹತ್ಯೆಯನ್ನು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ತಿಪ್ಪೆ ಸಾರಿಸುವುದು ಸರಿಯಲ್ಲ. ಇದರ ಹಿಂದೆ ಈ ದೇಶದ ಕಾನೂನನ್ನು ಧಿಕ್ಕರಿಸುವ ಮಾನಸಿಕತೆ ಅಡಗಿದೆ. ಹಾವೇರಿಯಲ್ಲಿ ಹಿಂದೂ ಯುವಕನ ಜೊತೆ ಬಂದ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ತಾಲೀಬಾನಿ ಮನಃಸ್ಥಿತಿಯವರ ಕೃತ್ಯ ಇದು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಿದವರನ್ನು ಸಮರ್ಥಿಸುವ ಮನಃಸ್ಥಿತಿ, ಸಹೋದ್ಯೋಗಿಗೆ ಮನೆಗೆ ಡ್ರಾಪ್ ಕೊಟ್ಟ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್ಗಿರಿಯ ಮನಃಸ್ಥಿತಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ವಿಧ್ವಂಸಕ ಮನಃಸ್ಥಿತಿ, ರಾಮನವಮಿಯ ದಿನ ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಮಾಡುವ ಮನಃಸ್ಥಿತಿಯನ್ನು ಬೆಂಬಲಿಸಿದ್ದರ ಪರಿಣಾಮ ಇದು ಎಂದು ಎಚ್ಚರಿಸಿದ್ದಾರೆ.

ಇದರ ಹಿಂದಿರುವ ಧೈರ್ಯ ಯಾವುದು ಗೊತ್ತೇ? ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯನವರೇ ಇದೇನಾ ನೀವು ಕಂಡ ಕನಸಿನ ಸರ್ವಜನಾಂಗದ ಶಾಂತಿಯ ತೋಟ? ಎಂದು ಪ್ರಶ್ನಿಸಿದ್ದಾರೆ.


































